ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಭೂಮಿ ಖಾಲಿಯಾಗುತ್ತಿದ್ದು, ಮುಂದಿನ 10-12 ವರ್ಷಗಳಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಲು ಭೂಮಿಯನ್ನು ಹುಡುಕುವುದು ಕಷ್ಟವಾಗಬಹುದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.
ಈ ಹಿಂದೆಯೇ ಸಚಿವರು ಚುನಾಯಿತ ಪ್ರತಿನಿಧಿಗಳಿಗೆ ಈ ವಿಚಾರವನ್ನು ಗಮನಕ್ಕೆ ತಂದಿದ್ದರು. ಇದೀಗ ಮತ್ತೊಮ್ಮೆ ಅವರ ಕ್ಷೇತ್ರಗಳಲ್ಲಿನ ಸರ್ಕಾರಿ ಭೂಮಿಗಳ ಗುರುತಿಸಲು ಪತ್ರ ಬರೆಯುತ್ತಿದ್ದಾರೆ.
ಅಶೋಕ್ ಅವರು “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರು ಹಳ್ಳಿಯೊಂದರಲ್ಲಿ ಉಳಿದು ನಿವಾಸಿಗಳ ಕಷ್ಟಗಳನ್ನು ಆಲಿಸುತ್ತಾರೆ.
ಪ್ರವಾಸ ಸಂದರ್ಭದಲ್ಲಿ ಸಚಿವರಿಗೆ ಶಾಲೆ, ಕಾಲೇಜುಗಳು, ಅಂಗನವಾಡಿಗಳು, ಸ್ಮಶಾನಗಳು, ಆಟದ ಮೈದಾನಗಳು, ಆರೋಗ್ಯ ಕೇಂದ್ರಗಳು ಮತ್ತು ಹಲವಾರು ಸೌಲಭ್ಯಗಳಿಗೆ ಭೂಮಿಯ ಕೊರತೆಯಿದೆ ಎಂಬುದು ಗಮನಕ್ಕೆ ಬಂದಿದೆ.
ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಅವರು ಈ ಹಿಂದೆ ಎಲ್ಲಾ ಶಾಸಕರು ಮತ್ತು ಸಂಸದರಿಗೆ ಪತ್ರ ಬರೆದಿದ್ದರು. ಆದರೆ, ಈ ಪತ್ರಕ್ಕೆ ಯಾವುದೇ ನಾಯಕರೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆಂದು ಅಶೋಕ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೈದಾನದಲ್ಲಿ ಶಾಲೆ ನಿರ್ಮಿಸಲು ಬಿಬಿಎಂಪಿ ಮುಂದು: ಅಧಿಕಾರಿಗಳ ವಿರುದ್ಧ ಆರ್ಆರ್ನಗರ ನಿವಾಸಿಗಳ ಪ್ರತಿಭಟನೆ
“ಭೂಮಿಯ ಬೆಲೆ ಹೆಚ್ಚುತ್ತಿದೆ ಮತ್ತು ಸರ್ಕಾರವು ಅಂತಹ ಹೆಚ್ಚಿನ ಬೆಲೆಗೆ ಆಸ್ತಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಭವಿಷ್ಯಕ್ಕಾಗಿ ಭೂಮಿಯನ್ನು ಉಳಿಸುವ ಸಮಯ ಇದು. ಒಂದೋ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ. ಆ ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳನ್ನು ಚೆನ್ನಾಗಿ ತಿಳಿದಿರುವ ಕಾರಣ ನಾವು ಅವರ ಬೆಂಬಲವನ್ನು ಕೋರುತ್ತಿದ್ದೇವೆಂದು ಹೇಳಿದ್ದಾರೆ.
ಅತಿಕ್ರಮಣ ದೊಡ್ಡ ಸಮಸ್ಯೆ
ಹಲವೆಡೆ ಕೃಷಿ ಹೆಸರಿನಲ್ಲಿ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಬೆಟ್ಟದ ತುದಿಗಳು, ಸರೋವರದ ಬದಿಗಳು ಮತ್ತು ಅರಣ್ಯ ಭೂಮಿಯನ್ನು ಆಕ್ರಮಿಸಿಕೊಳ್ಳಲಾಗುತ್ತಿದೆ. ಅವರನ್ನು ತೆರವು ಮಾಡುವುದು ಸವಾಲಿನ ಕೆಲಸವಾಗಿ ಹೋಗಿದೆ. ಹಾಗೆ ಮಾಡಿದರೆ ಸರ್ಕಾರ ಮತ್ತು ಅಧಿಕಾರಿಗಳನ್ನು ರೈತ ವಿರೋಧಿ ಎಂದು ಬಿಂಬಿಸುತ್ತಾರೆ. ಈ ಜನರು ರೈತರಲ್ಲ, ಆದರೆ ಅತಿಕ್ರಮಣದಾರರು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 2,000 ಕ್ಕೂ ಹೆಚ್ಚು ಹಳ್ಳಿಗಳಿಗೆ ಸ್ಮಶಾನಗಳಿಲ್ಲ, ಇನ್ನೂ ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಭೂಮಿಯ ಕೊರತೆ ಕಾರಣವಾಗಿದೆ ಎಂದರು.