ರಾಜ್ಯ

ಬೆಂಗಳೂರು: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ ವ್ಯಕ್ತಿ

Ramyashree GN

ಬೆಂಗಳೂರು: ದೆಹಲಿಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾಳನ್ನು ಆಕೆಯ ಜೊತೆಗಿದ್ದವನೇ ಕೊಲೆ ಮಾಡಿದ್ದ. ಅಂತದ್ದೇ ಪ್ರಕರಣ ಬೆಂಗಳೂರು ನಗರದ ಹೊರಮಾವು ಪ್ರದೇಶದಲ್ಲಿ ನಡೆದಿದೆ.

ಯಾವುದೋ ವಿಚಾರಕ್ಕೆ ಇಂದು ಬೆಳಗ್ಗೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತನ್ನ ಜೊತೆಯಲ್ಲಿದ್ದ ಯುವತಿಯ ತಲೆಯನ್ನು ಗೋಡೆಗೆ ಗುದ್ದಿ ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ರಾಮೂರ್ತಿನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತರನ್ನು ನೇಪಾಳ ಮೂಲಕ ಕೃಷ್ಣ ಕುಮಾರಿ ಎಂದು ಗುರುತಿಸಲಾಗಿದೆ. ಕೃಷ್ಣ ಕುಮಾರಿ ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದರು ಎನ್ನಲಾಗಿದೆ.

ಆರೋಪಿ ಸಂತೋಷ್ ಧಾಮಿ ಸಹ ಟಿ.ಸಿ. ಪಾಳ್ಯದಲ್ಲಿ ಬಾರ್ಬರ್ ಶಾಪ್​​​ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಬಳಿಕ ಒಟ್ಟಿಗೆ ಇರಲು ನಿರ್ಧರಿಸಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ಇಂದು ಮುಂಜಾನೆ ನಡೆದ ಜಗಳದ ಹಿನ್ನೆಲೆಯಲ್ಲಿ ಕೃಷ್ಣ ಕುಮಾರಿಯ ಜೊತೆಗಿದ್ದ ಸಂತೋಷ್ ಧಾಮಿ ಎಂಬಾತ ಆಕೆಯ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ಕೃಷ್ಣಕುಮಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಬ್ಬರು ಹಲವಾರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.

SCROLL FOR NEXT