ಮೈಸೂರು: ಟಿಪ್ಪು ಎಕ್ಸ್ಪ್ರೆಸ್ ಮರುನಾಮಕರಣ ಮಾಡಿ ಸಮಾಜವನ್ನು ಬಿಜೆಪಿ ಒಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟಿಪ್ಪು ಎಕ್ಸ್ಪ್ರೆಸ್ಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಕಾಂಗ್ರೆಸ್ ಎಂಎಲ್`ಸಿ ಡಿ ತಿಮ್ಮಯ್ಯ ಅವರು ಕೇಂದ್ರ ಮತ್ತು ರೈಲ್ವೆ ಸಚಿವಾಲಯದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಿಮ್ಮಯ್ಯ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾವಣೆ: ಇನ್ಮುಂದೆ ಒಡೆಯರ್ ಎಕ್ಸ್ ಪ್ರೆಸ್, ಕುವೆಂಪು ಎಕ್ಸ್ ಪ್ರೆಸ್
"ಇದು ದುರದೃಷ್ಟಕರ ನಡೆ ಮತ್ತು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಇಂತಹ ರಾಜಕಾರಣ ಮಾಡಬಾರದು. ಅದೊಂದು ನೀಚ ಕೃತ್ಯ. ರೈಲಿಗೆ ಟಿಪ್ಪು ಹೆಸರು ಬದಲಿಸಿ ಬಿಜೆಪಿ ಯಶಸ್ಸು ಸಾಧಿಸಿದೆಯೇ? ಸಾರ್ವಜನಿಕರಿಂದ ಬೇಡಿಕೆ ಬಾರದಿದ್ದರೂ ಸರ್ಕಾರ ಹೆಸರು ಬದಲಿಸಿದೆ. ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕಲು ಅವರು ಇದನ್ನು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
"ಹೆಸರಿಸದ ಹಲವಾರು ರೈಲುಗಳು ಇದ್ದವು. ಟಿಪ್ಪು ಎಕ್ಸ್ಪ್ರೆಸ್ಗೆ ಮರುನಾಮಕರಣ ಮಾಡುವ ಬದಲು, ಹಿಂದಿನ ಮೈಸೂರು ರಾಜಮನೆತನದ ಹೆಸರನ್ನು ಸರ್ಕಾರವು ಇತರೆ ರೈಲುಗಳಿಗೆ ಮರುನಾಮಕರಣ ಮಾಡಬೇಕಿತ್ತು. ಬದಲಿಗೆ ನಿರುದ್ಯೋಗ, ಬೆಲೆ ಏರಿಕೆ, ದಲಿತರ ರಕ್ಷಣೆ, ರೈತರಿಗೆ ಭದ್ರತೆ ನೀಡುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದರು.