ಉಡುಪಿ: ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನಿನ್ನೆ ಭಿನ್ನ ತೀರ್ಪು ನೀಡಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿರುವುದು ಹಿಜಾಬ್ ನಿಷೇಧ (Hijab row) ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.
ಉಡುಪಿ ಮೂಲದ ನಾಗರಿಕ ಹಕ್ಕುಗಳ ರಕ್ಷಣೆ ಒಕ್ಕೂಟ ಅಧ್ಯಕ್ಷ ಹುಸೈನ್ ಕೊಡಿಬೆಂಗ್ರೆ ನಿನ್ನೆ ಮಾಧ್ಯಮಗಳೊಂದಿಗೆ ವಿದ್ಯಾರ್ಥಿನಿಯರ ಪರ ಮಾತನಾಡಿ, ವಿಸ್ತೃತ ಪೀಠದ ಮುಂದೆ ಪ್ರಕರಣ ವರ್ಗಾವಣೆಯಾಗಿರುವುದರಿಂದ ನಮ್ಮ ಪರವಾಗಿ ಅಂತಿಮ ತೀರ್ಪು ಬರಬಹುದೆಂದು ಆಶಾವಾದ ಹೊಂದಿದ್ದೇವೆ, ನಮ್ಮ ಅಡ್ವೊಕೇಟ್ ವಿಸ್ತೃತ ಪೀಠ ಮುಂದೆ ವಾದ ಮಂಡಿಸಲು ಸಿದ್ದರಾಗಿದ್ದಾರೆ ಎಂದರು.
ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೇಳಿದ ಬಹುತೇಕ ವಿದ್ಯಾರ್ಥಿನಿಯರು ನಂತರ ತರಗತಿಗಳಿಗೆ ಅಧ್ಯಯನವನ್ನು ಅರ್ಧದಲ್ಲಿಯೇ ಬಿಟ್ಟಿದ್ದಾರೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಗಮನಿಸಿರುವ ಅಂಶಗಳು ವಿದ್ಯಾರ್ಥಿನಿಯರ ಪರವಾಗಿದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ, ನಮ್ಮ ಪರವಾಗಿ ತೀರ್ಪು ಬರಬಹುದು ಎಂಬ ಆಶಾವಾದದಲ್ಲಿದ್ದೇವೆ ಎಂದಿದ್ದಾರೆ.
ಉಡುಪಿ ಶಾಸಕ ಕೆ ರಘುಪತಿ ಭಟ್, ಸದ್ಯಕ್ಕೆ ಹೈಕೋರ್ಟ್ ತೀರ್ಪು ಮುಂದುವರಿಯುತ್ತದೆ. ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಹಿಜಾಬ್ ಧರಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಮೇಲೆ ಮುಂದಿನ ನಿರ್ಧಾರ ನಿಂತಿರುತ್ತದೆ ಎಂದು ಹಿಜಾಬ್ ವಿವಾದ ಆರಂಭವಾದ ಉಡುಪಿಯ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು ಹೇಳಿದರು.
ಹಿಜಾಬ್ ಇಲ್ಲದೆ ತರಗತಿಯೊಳಗೆ ಕುಳಿತುಕೊಳ್ಳಲು ಬಹುತೇಕ ವಿದ್ಯಾರ್ಥಿನಿಯರಿಗೆ ಸಮಸ್ಯೆಯಿಲ್ಲ. ಬಹುತೇಕ ಮುಸ್ಲಿಮರು ಕೂಡ ನನ್ನಲ್ಲಿ ಇದೇ ಅಭಿಪ್ರಾಯ ಹಂಚಿಕೊಂಡರು. ವಿರೋಧಿಸುವವರು ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡಲು ನೋಡುತ್ತಿದ್ದಾರೆ. ಬಂದ್ ಗೆ ಕರೆ ಕೊಟ್ಟಾಗ ಹಿಂದೂ ಜನರು ಅದನ್ನು ವಿರೋಧಿಸಿ ಕರಾವಳಿ ಭಾಗದಲ್ಲಿ ದೇವಸ್ಥಾನ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು, ಭಾಗವಹಿಸಲು ಕೂಡ ಅವಕಾಶ ನೀಡಲಿಲ್ಲ. ಹಲಾಲ್ ವಿವಾದ ಆರಂಭವಾಯಿತು. ಇವೆಲ್ಲ ಹಿಂದೆ ಇರಲಿಲ್ಲ ಎನ್ನುತ್ತಾರೆ.
ಕೋರ್ಟ್ ತೀರ್ಪನ್ನು ಗೌರವಿಸಬೇಕೆಂದು ನಾನು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡುತ್ತೇನೆ, ಇರಾನ್ ನಂತಹ ದೇಶಗಳಲ್ಲಿ ಹಿಜಾಬ್ ಗೆ ವಿರೋಧವಿದೆ. ಇಲ್ಲಿ ನಾವು ಹಿಜಾಬ್ ನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೇಳುತ್ತಿಲ್ಲ,ಕೇವಲ ವಿದ್ಯಾರ್ಥಿನಿಯರು ತರಗತಿಯೊಳಗೆ ಕುಳಿತುಕೊಳ್ಳುವಾಗ ಹಾಕುವುದು ಬೇಡ ಎನ್ನುತ್ತಿದ್ದೇವೆ ಎಂದರು.
ಉಡುಪಿ ಎಸ್ಪಿ ಅಕ್ಷಯ್ ಎಂ ಹಕೆ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ಕೊಟ್ಟು ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ನೋಡಿಕೊಳ್ಳಲು ಕ್ರಮ ತೆಗೆದುಕೊಂಡಿದ್ದಾರೆ.