ರಾಜ್ಯ

ಬೆಂಗಳೂರಿ-ಮೈಸೂರು ಹೆದ್ದಾರಿ: ಚಾಲಕನ ಕಣ್ಣಿಗೆ ರಾಸಾಯನಿಕ ಎರಚಿ, ನಗದು ದೋಚಿ ಲಾರಿಯೊಂದಿಗೆ ಪರಾರಿ

Ramyashree GN

ಬೆಂಗಳೂರು: ಇತ್ತೀಚೆಗೆ ಮೂತ್ರ ವಿಸರ್ಜನೆಗೆಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನ ನಿಲ್ಲಿಸಿದ್ದ 31 ವರ್ಷದ ಟ್ರಾನ್ಸ್‌ಪೋರ್ಟರ್‌ ಮೇಲೆ ದಾಳಿ ನಡೆಸಿದ ಮೂವರು, ಅವರ ಹೊಚ್ಚ ಹೊಸ ಲಾರಿಯೊಂದಿಗೆ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ನಿವಾಸಿ ಕೆ. ಜಯರಾಮ್ ಎಂಬಾತ ಸೋಮನಹಳ್ಳಿಯ ಕಂಪನಿಯಿಂದ ಜಾನುವಾರುಗಳ ಮೇವನ್ನು ವಿತರಿಸಿ ಗ್ರಾಹಕರಿಂದ ಪಡೆದ ಹಣವನ್ನು ಸಂಸ್ಥೆಗೆ ಹಸ್ತಾಂತರಿಸಲು ತೆರಳುತ್ತಿದ್ದ.

ಶುಕ್ರವಾರ ರಾತ್ರಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಅವರು, ಮೂತ್ರ ವಿಸರ್ಜನೆಗೆಂದು ತೆರಳಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರ ತಂಡ ಆತನ ಮುಖಕ್ಕೆ ರಾಸಾಯನಿಕ ಎರಚಿ ವಾಹನ ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಸಂತ್ರಸ್ತ ಕೆಲವು ವಾಹನ ಚಾಲಕರ ಸಹಾಯ ಪಡೆದು ನೈಸ್ ರಸ್ತೆ ತಲುಪಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಈ ಸಂಬಂಧ ಶನಿವಾರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

ಜಯರಾಮ್ ಮಾತನಾಡಿ, 'ಅವರು (ಆರೋಪಿಗಳು) ಬೆಂಕಿಕಡ್ಡಿ ಕೇಳಿದರು. ನಾನು ಧೂಮಪಾನ ಮಾಡುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅವರಲ್ಲಿ ಒಬ್ಬಾತ ನನ್ನನ್ನು ಹಿಂದಿನಿಂದ ಹಿಡಿದುಕೊಂಡ. ಇನ್ನಿಬ್ಬರು ನನ್ನ ಕಣ್ಣಿಗೆ ರಾಸಾಯನಿಕಗಳನ್ನು ಸಿಂಪಡಿಸಿದರು. ಬಳಿಕ ನನ್ನ ಜೇಬಿನಿಂದ ನಗದು ಮತ್ತು ಪರ್ಸ್ ಅನ್ನು ತೆಗೆದುಕೊಂಡ ನಂತರ ಅವರು ತನ್ನ ಲಾರಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿದ್ದಾರೆ.

ಈ ವೇಳೆ ಜೋರಾಗಿ ಮಳೆಯೂ ಶುರುವಾಯಿತು ಮತ್ತು ನಾನು ಸುಮಾರು 45 ನಿಮಿಷಗಳ ಕಾಲ ರಸ್ತೆಯಲ್ಲಿದ್ದೆ. ನನಗೆ ಕಣ್ಣು ತೆರೆಯಲಾಗಲಿಲ್ಲ. ಅಂತಿಮವಾಗಿ ನೈಸ್ ರಸ್ತೆಯನ್ನು ತಲುಪಲು ಯಾರೋ ನನಗೆ ಸಹಾಯ ಮಾಡಿದರು'. ಭಾನುವಾರ, ಪೊಲೀಸರು ನನಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದರು, ಆದರೆ ಮಳೆಯಿಂದಾಗಿ ಹೆಚ್ಚು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.

ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಎಕ್ಸ್‌ಪ್ರೆಸ್‌ವೇಯ ಜಯಪುರ ಸೇತುವೆ ಬಳಿ ಘಟನೆ ನಡೆದಿದ್ದು, ನಗದು ಹಾಗೂ ಇತರೆ ಬೆಲೆ ಬಾಳುವ ವಾಹನದ ಒಟ್ಟು ಮೌಲ್ಯ ಸುಮಾರು 9.6 ಲಕ್ಷ ಎಂದು ಅಂದಾಜಿಸಲಾಗಿದೆ.
'ದರೋಡೆ ಮಾಡಿದ ನಂತರ ತಡರಾತ್ರಿಯಾದ ಕಾರಣ ವಾಹನ ಚಾಲಕರ ಸಹಾಯದಿಂದ ಮನೆಗೆ ಮರಳಿದೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ.

ನಾವು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದು, ರಾಮನಗರ ಜಿಲ್ಲಾ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT