ರಾಜ್ಯ

ಹುಬ್ಬಳ್ಳಿಯಲ್ಲಿ ಜನರಿಗೆ ಎಚ್ಚರಿಕೆ ನೀಡಲು ವಿಶಿಷ್ಟ ಉಪಾಯ: 'ಒಡೆದ ದೇವರ ಫೋಟೋ ಫ್ರೇಮ್ ಮರದ ಕೆಳಗೆ ಇಟ್ಟರೆ ನಿಮಗೆ...'!

Manjula VN

ಹುಬ್ಬಳ್ಳಿ: ಒಡೆದ ದೇವರ ಮೂರ್ತಿಗಳು ಹಾಗೂ ದೇವರ ಫೋಟೋಗಳನ್ನು ಮರದ ಕೆಳಗೆ ಇಟ್ಟು ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದ್ದು, ಈ ಬೆಳವಣಿಗೆ ಸ್ಥಳೀಯ ನಿವಾಸಿಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹುಬ್ಬಳ್ಳಿಯ ನವನಗರದ ನಿವಾಸಿಗಳು ವಿಶಿಷ್ಟ ಉಪಾಯವೊಂದನ್ನು ಮಾಡಿದ್ದಾರೆ. 

ಒಡೆದ ದೇವರ ಫೋಟೋಗಳನ್ನು ಇಡುವ ಮರಗಳಿಗೆ ಪೋಸ್ಟ್ ಅಂಟಿಸಲಾಗಿದೆ. ಗಿಡದ ಕೆಳಗೆ ದೇವರ ಫೋಟೋ ಇಡಬೇಡಿ, ಮನೆಯಲ್ಲಿ ಕುರುಟ, ಕುಂಟ, ಕಿವುಡ ಸೊಟ್ಟ ಮಕ್ಕಳು ಹುಟ್ಟುತ್ತಾರೆಂದು ಎಚ್ಚರಿಸಿದ್ದಾರೆ. 

ಈ ಪೋಸ್ಟ್ ಗಳಲ್ಲಿನ ಅಕ್ಷರಗಳನ್ನು ಕನ್ನಡದಲ್ಲಿ ಬರೆಯಲಾಗಿದೆ. ಪೋಸ್ಟ್ ಅಂಟಿಸಿರುವ ಮರದ ಕೆಳಗೆ ಹತ್ತಾರು ಒಡೆದ ಫೋಟೋ ಫ್ರೇಮ್ ಗಳಿರುವುದು ಕಂಡು ಬಂದಿದೆ. 

ಧಾರವಾಡದಲ್ಲಿ ಹಲವಾರು ಸಂಸ್ಥೆಗಳು ಈ ಸಮಸ್ಯೆಯನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರಾದರೂ ಯಾವುದೂ ಯಶಸ್ವಿಯಾಗಿಲ್ಲ. ಈ ಹಿಂದೆ ಒಡೆದ ಫೋಟೋ ಹಾಗೂ ದೇವರ ಮೂರ್ತಿಗಳನ್ನು ದೇವಾಲಯಗಳು, ನದಿಗಳ ಬಳಿ ಇಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ವಾಸವಿರುವ ಸ್ಥಳಗಳಲ್ಲಿರುವ ಮರಗಳ ಕೆಳಗೆ ಕಂಡು ಬರುತ್ತಿವೆ. 

ಯಾವುದಾದರೂ ಮರದ ಕಳೆಗೆ ಒಂದು ಫೋಟೋ ಫ್ರೇಮ್ ಕಂಡು ಬಂದರೂ ನಂತರ ಅದನ್ನು ಜನರು ಅನುಸರಿಸಲು ಶುರು ಮಾಡುತ್ತಾರೆ. ಮರದ ಕಳೆಗೆ ತಮ್ಮ ಮನೆಗಳಲ್ಲಿರುವ ಫೋಟೋಗಳನ್ನು ತಂದು ಇಡುತ್ತಾರೆ. ಫೋಟೋಗಳನ್ನು ಮುರಿದು ಹೋದರೆ ಅವುಗಳನ್ನು ವಿಸರ್ಜನೆ ಮಾಡಲು ಜನರು ಉತ್ತಮ ಮಾರ್ಗಗಳನ್ನು ಕಂಡು ಕೊಳ್ಳಬೇಕು. ಮರದ ಕಳಗೆ ಇಡುವುದರಿಂದ ಜನರಿಗಷ್ಟೇ ಅಲ್ಲದೆ, ಸ್ಥಳೀಯ ಪ್ರಾಣಿಗಳಿಗೂ ಸಮಸ್ಯೆಗಳಾಗುತ್ತವೆ ಎಂದು ನವನಗರದ ನಿವಾಸಿಯೊಬ್ಬರು ಹೇಳಿದ್ದಾರೆ. 

ರಸ್ತೆ ಹಾಗೂ ಕೆರೆಗಳ ಬಳಿ ಹೆಚ್ಚು ಜನರಿಲ್ಲದ ಬೆಳಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಮುರಿದ ಫೋಟೋಗಳನ್ನು ಇರಿಸಿ ಹೋಗುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೆಳಗೇರಿ ಕೆರೆಗಳಲ್ಲಿ ಇಂತಹ ನೂರಾರು ಫೋಟೋ ಫ್ರೇಮ್‌ಗಳು ಪತ್ತೆಯಾಗಿವೆ. ಮುರಿದ ಫೋಟೋಗಳ ನಿರ್ವಹಿಸಲು ಮತ್ತು ಸ್ಥಳಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಜನರು ಮುಂದೆ ಬಂದಿದ್ದಾರೆ. ಆದರೆ, ಸ್ವಚ್ಛಗೊಳಿಸಿದ ಬಳಿಕ ಕೆಲ ದಿನಗಳ ನಂತರ ಮತ್ತೆ ಅದೇ ರೀತಿಯ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. 

ಇದು ಸೂಕ್ಷ್ಮ ವಿಚಾರವಾಗಿದ್ದು, ಜನರ ಅಜ್ಞಾನವನ್ನು ತೋರಿಸುತ್ತದೆ. ಇದು ಅವರದೇ ದೇವರಿಗೆ ತೋರುತ್ತಿರುವ ಅಗೌರವವಾಗಿದೆ. ಒಡೆದ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಕೆಟ್ಟದಾಗುತ್ತದೆ ಎಂಬುದು ಜನರ ಭಾವನೆ. ಹೀಗಾಗಿ ದೇವಸ್ಥಾನದ ಬಳಿ ಅವುಗಲನ್ನು ಇಡುತ್ತಾರೆ. 

ದೇವರ ಫೋಟೋಗಳಿರುವ ಚೌಕಟ್ಟುಗಳನ್ನು ಒಡೆದರೆ ಅವುಗಳನ್ನು ಇಟ್ಟುಕೊಳ್ಳುವುದಿಲ್ಲ ಮತ್ತು ಮನೆಯಲ್ಲಿ ಇಡಲಾಗುವುದಿಲ್ಲ ಮತ್ತು ದೇವಸ್ಥಾನದ ಬಳಿ, ಕೆರೆ, ಮರಗಳ ಕೆಳಗೆ ಇಡುತ್ತಾರೆ. ಆದರೆ, ಇದೀಗ ಇದೇ ದೊಡ್ಡ ಸಮಸ್ಯೆಯಾಗಿ ತಲೆದೋರುತ್ತಿದೆ. ಎಂದು ಮತ್ತೊಬ್ಬ ನಿವಾಸಿ ಹೇಳಿದ್ದಾರೆ. 

"ಗಂಭೀರ ಸಮಸ್ಯೆಯಾಗಿರುವುದರಿಂದ ಕಸ ಸಾಗಿಸುವ ವಾಹನಗಳಲ್ಲಿ ಫೋಟೋ ಫ್ರೇಮ್‌ಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಕಳೆದ ವರ್ಷ ಇಬ್ಬರು ಭಿಕ್ಷುಕರು ತಮ್ಮ ತಳ್ಳುವ ಗಾಡಿಯಲ್ಲಿ ಒಡೆದ ಫೋಟೋ ಫ್ರೇಮ್‌ಗಳನ್ನು ಸಾಗಿಸುತ್ತಿದ್ದರು ಆದರೆ ಫ್ರೇಮ್‌ಗಳಲ್ಲಿ ದೇವರ ಫೋಟೋಗಳಿದ್ದ ಕಾರಣ ಕೆಲವು ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿದ್ದರು. ಮುರಿದ ಫೋಟೋ ಫ್ರೇಮ್ ಗಳನ್ನು ನಿರ್ವಹಣೆ ಮಾಡುವ ಕುರಿತು ಅಧಿಕಾರಿಗಳು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಧಾರವಾಡದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

SCROLL FOR NEXT