ರಾಜ್ಯ

ದಕ್ಷಿಣ ಕನ್ನಡ: 27 ವರ್ಷಗಳ ಬಳಿಕ ಎಂಡೋಸಲ್ಫಾನ್ ಸಂತ್ರಸ್ತ ವ್ಯಕ್ತಿ ಸಾವು

Manjula VN

ಮಂಗಳೂರು: ಕಳೆದ 27 ವರ್ಷಗಳಿಂದ ಎಂಡೋಸಲ್ಫಾನ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶರತ್ (30) ಮೃತ ವ್ಯಕ್ತಿಯಾಗಿದ್ದಾರೆ. ಶರತ್ ಅವರು ತಂದೆ ಸೋಮಪ್ಪ ಗೌಡ, ತಾಯಿ ಲಲಿತಾ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. 

ಮೃತ ಶರತ್ 3 ವರ್ಷದವನಾಗಿದ್ದಾಗಿನಿಂದಲೂ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗಿರಲಿಲ್ಲ, ವೈದ್ಯರ ಬಳಿ ತೆರಳಿದಾಗ ಶರತ್ ಹಾಗೂ ಆತನ ಸಹೋದರಿ ಭಾರತಿ ಇಬ್ಬರೂ ಎಂಡೋಸಲ್ಫಾನ್ ನಿಂದ ಬಳಲುತ್ತಿರುವುದು ತಿಳಿದುಬಂದಿತ್ತು. 

ಎಂಡೋಸಲ್ಫಾನ್ ವಿರುದ್ಧ ಹೋರಾಟ ಮಾಡುತ್ತಿರುವ ಶ್ರೀಧರ್ ಗೌಡ ಅವರು ಮಾತನಾಡಿ, ಭಾರತಿ ಹಾಸಿಗೆ ಹಿಡಿದ್ದು, ಆಕೆಯ ಅಕ್ಕನಿಗೆ ವಿವಾಹವಾಗಿದೆ. ಕುಟುಂಬ ಕಡುಬಡವರಾಗಿದ್ದು, ಗ್ರಾಮದಲ್ಲಿ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ಇಲ್ಲಿಂದ ಮುಖ್ಯರಸ್ತೆಗೆ ಹೋಗಲು 1 ಕಿ.ಮೀ ನಡೆದುಕೊಂಡು ಹೋಗಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಎಂಡೋಸಲ್ಫಾನ್‌ನ ಕಣ್ಗಾವಲು ಅಧಿಕಾರಿ ಡಾ.ನವೀನ್‌ಚಂದ್ರ ಮಾತನಾಡಿ, ಶರತ್‌ಗೆ ಸರಕಾರದಿಂದ ತಿಂಗಳಿಗೆ 4 ಸಾವಿರ ರೂ. ನೆರವು ದೊರೆಯುತ್ತಿತ್ತು. ಇದನ್ನು ಹೊರತುಪಡಿಸಿ ಬೇರೆ ಯಾವ ಸೌಲಭ್ಯವೂ ಸಿಗುತ್ತಿರಲಿಲ್ಲ. ಶರತ್ ತಂದೆ ಸೋಮಪ್ಪ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಸಾವುಗಳು ಹೆಚ್ಚುತ್ತಿವೆ, ಆದರೆ, ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಸಂತ್ರಸ್ತರ ಕುಟುಂಬಕ್ಕೆ ಸರಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

SCROLL FOR NEXT