ರಾಜ್ಯ

ಹಿರಿಯ ನಟ ದತ್ತಣ್ಣ, ಅವಿನಾಶ್ ಸೇರಿದಂತೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

Nagaraja AB

ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳು, ಸಂಸ್ಥೆಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಸರ್ಕಾರ ಅನುಸರಿಸಿಕೊಂಡು ಬಂದಿದ್ದು, ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್, ಕಿರುತೆರೆ ಕ್ಷೇತ್ರದಲ್ಲಿ ಸಿಹಿಕಹಿ ಚಂದ್ರು, ಲೇಖಕ ಅ.ರಾ. ಮಿತ್ರಾ ಸೇರಿದಂತೆ 67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ. 

ಪತ್ರಿಕೋದ್ಯಮ- ಬೆಂಗಳೂರಿನ ಹೆಚ್.ಆರ್. ಶ್ರೀಶಾ, ಗದಗ ಜಿಲ್ಲೆಯ ಜಿ.ಎಂ. ಶಿರಹಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ- ಬೆಂಗಳೂರಿನ ಇಸ್ರೋ ಸಂಸ್ಥೆ ಮಾಜಿ ನಿರ್ದೇಶಕ ಕೆ. ಶಿವನ್, ರಾಯಚೂರಿನ ಡಾ. ಡಿ.ಆರ್ ಬಳೂರಗಿ, ಕೃಷಿ- ಕೊಡಗಿನ ಗಣೇಶ್ ತಿಮ್ಮಯ್ಯ, ಚಿಕ್ಕಮಗಳೂರಿನ ಚಂದ್ರಶೇಖರ್ ನಾರಾಯಣಪುರ, ಪರಿಸರ- ರಾಮನಗರದ ಸಾಲುಮರದ ನಿಂಗಣ್ಣ, ಪೌರಕಾರ್ಮಿಕ - ಮಲ್ಲಮ್ಮ ಹೂವಿನ ಹಡಗಲಿ, ಆಡಳಿತ- ಡಾ. ಎಲ್.ಎಚ್. ಮಂಜುನಾಥ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶಿವಮೊಗ್ಗ, ಮಧನ್ ಗೋಪಾಲ್ ಬೆಂಗಳೂರು ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

"೨೦೨೧-೨೨ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆಯಾಗಿರುವ ಎಲ್ಲ ಸಾಧಕರು ಹಾಗೂ  'ಅಮೃತ ಮಹೋತ್ಸವ ರಾಜ್ಯಪ್ರಶಸ್ತಿ' ಪುರಸ್ಕೃತ ರಾಜ್ಯದ ೧೦ ಸಂಘ-ಸಂಸ್ಥೆಗಳನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಎಲ್ಲ ಸಾಧಕರ ಸಾಧನೆಗಳು ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ. ಹಾಗೆಯೇ, ಸಾಧಕರನ್ನು ಗುರುತಿಸುವಲ್ಲಿ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಿರುವ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. 

SCROLL FOR NEXT