ರಾಜ್ಯ

ಉಡುಪಿ: 25ಕ್ಕೂ ಹೆಚ್ಚು ಮರ ಕಡಿದ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಪ್ರಕರಣ ದಾಖಲು

Ramyashree GN

ಉಡುಪಿ: ಪರಿಸರ ಸಂರಕ್ಷಣೆಯಲ್ಲಿ ಇತರರಿಗೆ ಮಾದರಿಯಾಗಬೇಕಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕಳೆದ ವಾರ 25ಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆ. ಈ ಸಂಬಂಧ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಆತನ ವಿರುದ್ಧ ಮರ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ, ಪಿಡಬ್ಲ್ಯುಡಿ ಗುತ್ತಿಗೆದಾರ ಹಾಗೂ ಸ್ವಂತ ಸ್ಟೋನ್ ಕ್ರಷರ್ ಹೊಂದಿರುವ ವಾದಿರಾಜ್ ಶೆಟ್ಟಿ ಮರಗಳನ್ನು ಕಡಿದು ತಮ್ಮ ಅಡಕೆ ತೋಟದಲ್ಲಿ ಸಂಗ್ರಹಿಸಿದ್ದಾರೆ. ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಕಡಿದಿದ್ದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ವಾದಿರಾಜ್, ಅಡಿಕೆ ತೋಟವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಈ ಕೃತ್ಯ ಎಸಗಿದ್ದು, ಇದಕ್ಕೆ ಮರಗಳು ಅಡ್ಡಿಯಾಗಿದ್ದರಿಂದ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಕಡಿದು ಹಾಕಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮರಗಳು ಪಟ್ಟಾ ಅಥವಾ ಕುಮ್ಕಿ ಜಮೀನಿನಲ್ಲಿದ್ದವೇ ಎಂಬುದನ್ನು ತಿಳಿಯಲು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಕಡಿದ ಮರವನ್ನು ಅರಣ್ಯ ಇಲಾಖೆ ಡಿಪೋಗೆ ಸ್ಥಳಾಂತರಿಸಲಾಗುವುದು. ಮರಗಳು ಪಟ್ಟಾ ಭೂಮಿಯಲ್ಲಿ ಇದ್ದವುಗಳಾಗಿದ್ದರೆ, ದಂಡ ಪಾವತಿಸಿದ ನಂತರ ಅರಣ್ಯ ಇಲಾಖೆಯು ಅವುಗಳನ್ನು ಶೆಟ್ಟಿ ಅವರ ವಶಕ್ಕೆ ನೀಡಲು ಅನುಮತಿಸಬಹುದು.

ಹೆಬ್ರಿ ಆರ್‌ಎಫ್‌ಒ ಅನಿಲ್‌ ಕುಮಾರ್‌ ಮಾತನಾಡಿ, ಶೆಟ್ಟಿ ಅವರು ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಲು ಉದ್ದೇಶಿಸಿದ್ದರು. ಹೀಗಾಗಿ ಆರಂಭದಲ್ಲಿ ಕೆಲವು ತೆಂಗು ಮತ್ತು ಅಡಕೆ ಮರಗಳನ್ನು ಕಡಿದಿದ್ದರು. ನಂತರ, ಹಲಸು, ಕಾಡು ಹಲಸು, ಭೋಗಿ ಮತ್ತು ಧೂಪ (ವಟೇರಿಯಾ ಇಂಡಿಕಾ) ನಂತಹ ಕೆಲವು ಮರಗಳನ್ನು ಸಹ ಕಡಿದರು.

SCROLL FOR NEXT