ರಾಜ್ಯ

ಅಲಯನ್ಸ್ ವಿವಿ ರಿಜಿಸ್ಟ್ರಾರ್ ಗೆ ಗನ್ ತೋರಿಸಿ ಬೆದರಿಕೆ: ಆನೇಕಲ್ ಪೊಲೀಸರಿಂದ 21 ಮಂದಿ ಬಂಧನ

Shilpa D

ಬೆಂಗಳೂರು: ಅಲಯನ್ಸ್ ಯೂನಿವರ್ಸಿಟಿ ಆವರಣಕ್ಕೆ ನುಗ್ಗಿ ರಿಜಿಸ್ಟ್ರಾರ್‌ಗೆ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿಯನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ಅವರು ನೀಡಿದ ದೂರಿನ ಆಧಾರದ ಮೇಲೆ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಅಂಗೂರ್, ಸ್ವರ್ಣಲತಾ ಮತ್ತು ಅವರ ಬೆಂಬಲಿಗರ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959 ರ ಪ್ರಕಾರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಆರೋಪಿ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ  ಆಗಿದ್ದು ಸದ್ಯ ಆಕೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 10 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸ್ವರ್ಣಲತಾ ಮತ್ತು ಅಂಗೂರ್ ಸೇರಿದಂತೆ ಜನರ ಗುಂಪು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಆವರಣದಿಂದ ಹೊರಹೋಗುವಂತೆ ಹೇಳಿದರು ಎಂದು ನಿವೇದಿತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಅಲಯನ್ಸ್ ವಿವಿಯಲ್ಲಿ ಈ ಬೆಳವಣಿಗೆಗಳು ನಡೆದಿದ್ದು ಮಧುಕರ್ ಅಂಗೂರ್ ಟೀಮ್ ಬೌನ್ಸರ್​ಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆ ಹೊರಕ್ಕೆ ಹೋಗಿದ್ದು ಮಧುಕರ್ ಜೊತೆ ಆಗಮಿಸಿದ್ದ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ನಾನೇ ಯೂನಿವರ್ಸಿಟಿ ಚಾನ್ಸಲರ್ ಎಂದು ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ನಂತರ ಅವರು ನಿವೇದಿತಾ ಅವರ ಕೊಠಡಿಯನ್ನು ಪ್ರವೇಶಿಸಿ ಬಂದೂಕು ತೋರಿಸಿ ಭಯ ಪಡಿಸಿದ್ದಾರೆ. ಸ್ವರ್ಣಲತಾ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

SCROLL FOR NEXT