ರಾಜ್ಯ

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪರಿಣಾಮ: ಚಾಮರಾಜನಗರದಲ್ಲಿ ಮಗು ಮಾರಾಟ ಮಾಡಿದ ನಾಲ್ವರ ಬಂಧನ

Ramyashree GN

ಮೈಸೂರು: ಚಾಮರಾಜನಗರದಲ್ಲಿ ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮಂಡ್ಯದ ಕುಟುಂಬವೊಂದರಿಂದ ಮಗುವನ್ನು ರಕ್ಷಿಸುವ ಪ್ರಯತ್ನವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಮಂಗಳವಾರ, TNIE ಮತ್ತು kannadaprabha.com ನಲ್ಲಿ ಮೈಸೂರು ವಿಶ್ವವಿದ್ಯಾಲಯದ ತೃತೀಯಲಿಂಗಿ ಸಂಶೋಧನಾ ವಿದ್ಯಾರ್ಥಿಯೊಬ್ಬರು ಚಾಮರಾಜನಗರದಲ್ಲಿ ಮಗುವನ್ನು ಮಾರಾಟ ಮಾಡಿದ ಘಟನೆಯನ್ನು ಬಹಿರಂಗಪಡಿಸಿದ್ದಾರೆ ಎನ್ನುವ ವಿಸ್ತೃತ ವರದಿ ಪ್ರಕಟವಾಗಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಪೊಲೀಸರು ಹಾಗೂ ಇತರರ ಜತೆಗೂಡಿ ಮಗುವನ್ನು ಮಾರಾಟ ಮಾಡಿದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು.

ಹೋಟೆಲ್ ಸಿಬ್ಬಂದಿಯಾಗಿದ್ದ ಪತಿ ಬಸವ ಸಾಲ ತೀರಿಸಲು ಮಗುವನ್ನು ಮಾರಾಟ ಮಾಡಿರುವುದಾಗಿ ಹೃದ್ರೋಗಿಯಾಗಿರುವ ಮಗುವಿನ ತಾಯಿ ನಾಗವೇಣಿ ತಿಳಿಸಿದ್ದು, ಇದೀಗ ಮಗುವನ್ನು ವಾಪಸ್ ಪಡೆಯಬೇಕು ಎಂದಿದ್ದಾರೆ. ಈ ಸಂಬಂಧ ಅಧಿಕಾರಿಗಳು ಬಸವನನ್ನು ಮತ್ತು ಚಾಮರಾಜನಗರ ಪಟ್ಟಣದ ಗಾಳಿಪುರದ ನಾಲ್ವರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗೀತಾಲಕ್ಷ್ಮಿ ಮಾತನಾಡಿ, ಮಗುವನ್ನು ರಕ್ಷಿಸುವುದು ತಮ್ಮ ಆದ್ಯತೆಯಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗವೇಣಿ ಅವರು ಪುನರ್ವಸತಿ ಕೇಂದ್ರದಲ್ಲಿ ಇರಲು ನಿರಾಕರಿಸಿದ್ದರಿಂದ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿ ದೀಪಾ ಬುದ್ಧೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು TNIE ಗೆ ತಿಳಿಸಿದ್ದಾರೆ.

ನಾವಿಬ್ಬರೂ ಅನಾಥರಾಗಿದ್ದು, ಜೀವನೋಪಾಯಕ್ಕೆ ಸದ್ಯ ಏನೂ ಕೊರತೆ ಇಲ್ಲ. ಪತಿಯನ್ನು ಬಂಧಿಸಬೇಡಿ ಎಂದು ನಾಗವೇಣಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

SCROLL FOR NEXT