ರಾಜ್ಯ

ಬಡವರ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ಮಾಡಲು ಸಾಧ್ಯವಾದರೆ ನಾನು ಕೃತಜ್ಞ: ಪಿಎಂ ಕೇರ್ಸ್ ಟ್ರಸ್ಟ್ ಸದಸ್ಯೆಯಾಗಿ ಆಯ್ಕೆಯಾಗಿರುವ ಸುಧಾ ಮೂರ್ತಿ

Sumana Upadhyaya

ಬೆಂಗಳೂರು: “ಬಡವರ ಜೀವನದಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಮಾಡಲು ಸಾಧ್ಯವಾದರೆ ನಾನು ಕೃತಜ್ಞನಾಗಿದ್ದೇನೆ” ಎಂದು ಖ್ಯಾತ ಶಿಕ್ಷಣತಜ್ಞೆ ಮತ್ತು ಪರೋಪಕಾರಿ ಸುಧಾ ಮೂರ್ತಿ ಹೇಳಿದ್ದಾರೆ.

ಅವರು ಬೋರ್ಡ್ ಆಫ್ ಪಿಎಂ ಕೇರ್ಸ್ ಫಂಡ್ ಟ್ರಸ್ಟ್‌ನ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಬಗ್ಗೆ ಹೆಮ್ಮೆಪಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿ, ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳ ಮಂಡಳಿಗೆ ನನ್ನ ನಾಮನಿರ್ದೇಶನ ಮಾಡಿರುವ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ರತನ್ ಟಾಟಾ ಅವರಂತಹ ಕೆಲವು ಶ್ರೇಷ್ಠ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಗಮನ ಯಾವಾಗಲೂ ಬಡವರು ಮತ್ತು ಹಿಂದುಳಿದವರಿಗಾಗಿ ಕೆಲಸ ಮಾಡುವುದು. ಮಂಡಳಿಯ ಸದಸ್ಯನಾಗಿ ನಾನು ಅದನ್ನು ಮುಂದುವರಿಸುತ್ತೇನೆ ಎಂದರು.

ಸರ್ಕಾರದಿಂದ ಇನ್ನೂ ಅಧಿಕೃತ ಆದೇಶ ತಮ್ಮ ಬಳಿ ಬಂದು ತಲುಪಿಲ್ಲ ಎಂದರು. ಪಿಎಂ ಕೇರ್ಸ್ ಫಂಡ್‌ನ ಇತರ ಟ್ರಸ್ಟಿಗಳೆಂದರೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಟಿ ಥಾಮಸ್, ಮಾಜಿ ಡೆಪ್ಯೂಟಿ ಸ್ಪೀಕರ್ ಕರಿಯಾ ಮುಂಡಾ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ, ಭಾರತದ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ ಮತ್ತು ಟೀಚ್ ಫಾರ್ ಇಂಡಿಯಾದ ಸಹ-ಸಂಸ್ಥಾಪಕ ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಮಲ್ ಫೌಂಡೇಶನ್‌ನ ಮಾಜಿ ಸಿಇಒ ಆನಂದ್ ಶಾ.

ಮೊನ್ನೆ ಮಂಗಳವಾರ ನಡೆದ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ​​ಭಾಗವಹಿಸುವಿಕೆಯು ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗೆ ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸುತ್ತದೆ ಎಂದು ಹೇಳಿದ್ದರು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ನಿಧಿಯ ಟ್ರಸ್ಟಿಗಳು ಭಾಗವಹಿಸಿದ್ದರು.

SCROLL FOR NEXT