ರಾಜ್ಯ

ಐಸಿಸ್‌ ಜೊತೆ ನಂಟು: ಗಂಗಾವತಿ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ!

Srinivasamurthy VN

ಕೊಪ್ಪಳ: ನಿಷೇಧಿತ ಉಗ್ರ ಸಂಘಟನೆ ಐಸಿಸ್‌ ಜೊತೆ ನಂಟು ಹೊಂದಿದ ಆರೋಪದ ಮೇರೆಗೆ ಗಂಗಾವತಿಯಲ್ಲಿ ವ್ಯಕ್ತಿಯೋರ್ವನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮೈಬೂಬ್‌ ನಗರದ ನಿವಾಸಿ, ಬಾಳೆಹಣ್ಣಿನ ವ್ಯಾಪಾರಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಶಬ್ಬೀರ್‌, ನಿಷೇಧಿತ ಐಎಸ್‌ ಸಂಘಟನೆ ಜೊತೆ ನಂಟು ಹೊಂದಿದ ಆರೋಪದಲ್ಲಿ ಶಿವಮೊಗ್ಗದಲ್ಲಿ ಬಂಧನಕ್ಕೆ ಒಳಗಾಗಿರುವ ಯುವಕರ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ. ಪೊಲೀಸರು ಶಬ್ಬೀರನನ್ನು ವಶಕ್ಕೆ ಪಡೆದು ರಾತ್ರಿಯೇ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ. 

ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟ ಪ್ರಯೋಗ ನಡೆಸಿದ್ದ ಯುವಕರ ಮೊಬೈಲ್‌ನಲ್ಲಿ ಶಬ್ಬೀರ್‌ ಜೊತೆ ಮಾತನಾಡಿದ ಕರೆ ದಾಖಲೆಗಳು ಪತ್ತೆಯಾಗಿವೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

SCROLL FOR NEXT