ಶಿಕಾರಿಪುರ: ಲಿಂಗಾಯತ ಸಮುದಾಯದಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಲಿಂಗಾಯ ಸಮುದಾಯದ ಸಂಪೂರ್ಣ ಬೆಂಬಲ ಬಿಜೆಪಿಗೆ ಸಿಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಿಂಗಾಯತ ಸಮುದಾಯವನ್ನು ಯಾರು ಒಡೆಯುತ್ತಿದ್ದಾರೆಂಬುದು ಕರ್ನಾಟಕದ ಜನರಿಗೆ ಗೊತ್ತಿದೆ. ಲಿಂಗಾಯತ ಸಮುದಾಯದ ವಿರುದ್ಧ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಎಲ್ಲರಿಗೂ ತಿಳಿದಿದೆ, ಈ ಬಾರಿಯ ಚನಾವಣೆಯಲ್ಲಿ ಲಿಂಗಾಯ ಸಮುದಾಯವಷ್ಟೇ ಅಲ್ಲದೆ, ಎಲ್ಲಾ ವರ್ಗ, ಇತರೆ ಸಮುದಾಯಗಳೂ ಕೂಡ ಬಿಜೆಪಿಗೆ ಮತ್ತು ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಲಿಂಗಾಯತ ಸಮುದಾಯದವರು ಒಂದು ಕುಟುಂಬದೊಂದಿಗೆ ಅಲ್ಲ, ಬಿಜೆಪಿಯ ಜೊತೆಗಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ಅವರು ನಂಬಿಕೆ ಇಟ್ಟಿರುವಕ್ಕೆ ನಮಗೆ ಸಂತೋಷ ಹಾಗೂ ಹೆಮ್ಮೆ ಇದೆ. ಸಮುದಾಯವು ಬಿಜೆಪಿ ಮತ್ತು ಪ್ರಧಾನಿ ಮೋದಿಯ ಹಿಂದೆ ಬಲವಾಗಿ ನಿಂತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಮುಖ ನಾಯಕರ ನಿರ್ಗಮನದಿಂದ ಕನಲಿದ ಕಮಲ: ಬಿಜೆಪಿಗೆ ತಪ್ಪುತ್ತಾ ಲಿಂಗಾಯತರ ಬೆಂಬಲ; 'ನಿಷ್ಠೆ' ಬದಲಿಸಿತೇ ಸಮುದಾಯ?
ಇದೇ ವೇಳೆ ಭ್ರಷ್ಟಾಚಾರ ಹಾಗೂ ಶೇ.40 ಕಮಿಷನ್ ಆರೋಪಗಳನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದು ರಾಜ್ಯ ಹಾಗೂ ದೇಶದ ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಂದೆ ಪ್ರತಿನಿಧಿಸಿದ್ದ ಶಿಕಾರಿಪುರ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧೆಗಿಳಿಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ವಿಜಯೇಂದ್ರ ಅವರು, ಶಿಕಾರಿಪುರ ಕ್ಷೇತ್ರ ಬಿಜೆಪಿಗೆ ಮಹತ್ವದ್ದಾಗಿದೆ. ಕಳೆದ 40 ವರ್ಷಗಳಿಂದ ಈ ಕ್ಷೇತ್ರ ನನ್ನ ತಂದೆ ಯಡಿಯೂರಪ್ಪ ಅವರನ್ನು ಆಶೀರ್ವದಿಸುತ್ತಿದೆ. ಇದರಿಂದ ಮೊದಲ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
"ಕರ್ನಾಟಕದ ಜನರು ಪ್ರಧಾನಿ ಮೋದಿಯವರ ನಾಯಕತ್ವವನ್ನು ನಂಬಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಇದನ್ನೂ ಓದಿ: ಅಲುಗಾಡುತ್ತಿದೆ ಬಿಜೆಪಿ ಲಿಂಗಾಯತ ಮೂಲ: ಸಂತೋಷ್ 'ಕು'ತಂತ್ರಕ್ಕೆ ಕೇಸರಿ ಪಡೆ ವಿಲವಿಲ; ಶೆಟ್ಟರ್ ಸೇರ್ಪಡೆಯಿಂದ 'ಕೈ'ಗೆ ಆನೆ ಬಲ!
ಯಡಿಯೂರಪ್ಪ ಇಲ್ಲದೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಿಜೆಪಿಯ ಮುಂದಿರುವ ಸವಾಲಾಗಿದೆ. ರಾಜೀನಾಮೆ ನೀಡಿದರೂ ಯಡಿಯೂರಪ್ಪ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರ ನಾಯಕತ್ವ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಲಿಂಗಾಯತ ಸಮುದಾಯದಲ್ಲಿ ಒಡಕು ಮೂಡಿಸುತ್ತಿದೆ, 'ಕಾಂಗ್ರೆಸ್ ಪಕ್ಷಕ್ಕೆ ಹೊಸ ವಿಚಾರಗಳಾವುದೂ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿದ್ದಾಗ ಮತ್ತು ಐದು ವರ್ಷ ಪೂರೈಸಿದಾಗ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದಾಗ ಲಿಂಗಾಯತ ಸಮುದಾಯದಲ್ಲಿ ಒಡಕು ಮೂಡಿಸಿದರು. ಕಾಂಗ್ರೆಸ್ ಯಾವುದೇ ಹಂತಕ್ಕೆ ಇಳಿಯಬಹುದು ಎಂದು ಬೇಸರ ವ್ಯಕ್ತಪಡಿಸಿದರು.