ರಾಜ್ಯ

ನನ್ನ ಮಗನ ಹತ್ಯೆಗೆ ಪ್ರಯತ್ನಗಳು ನಡೆಯುತ್ತಿವೆ: ಹಿಂಡಲಗಾ ಜೈಲಿನ ಅಧಿಕಾರಿಗಳ ವಿರುದ್ಧ ಖೈದಿಯ ತಾಯಿ ಆರೋಪ

Manjula VN

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಬೆಳಕಿಗೆ ಬಂದ ಬೆನ್ನಲ್ಲೇ ಜೈಲಿನ ಅಧಿಕಾರಿಗಳು ನನ್ನ ಮಗನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಕೈದಿಯೊಬ್ಬರ ತಾಯಿ ಆರೋಪಿಸಿದ್ದಾರೆ.

ಹಣ ಪಡೆದು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಡ್ಯ ಜಿಲ್ಲೆಯ ಸುರೇಶ್ ಕುಮಾರ್ ಅವರನ್ನು 2021ರಲ್ಲಿ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಕೈದಿ ಸುರೇಶ್ ಕುಮಾರ್ ಮೇಲೆ ಮತ್ತೊಬ್ಬ ಕೈದಿ ಜುಲೈ 29 ರಂದು ಹಲ್ಲೆ ನಡೆಸಿದ್ದ. ಸ್ಕ್ರೂ ಡ್ರೈವರ್ ನಿಂದ 5 ಬಾರಿ ಚುಚ್ಚಿ ಹತ್ಯೆಗೆ ಪ್ರಯತ್ನ ನಡೆಸಿದ್ದ. ಕೂಡಲೇ ಸುರೇಶ್ ಕುಮಾರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆಯ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇದೀಗ ಸುರೇಶ್ ಕುಮಾರ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆ ನಡುವಲ್ಲೇ ಸುರೇಶ್ ಕುಮಾರ್ ಅವರ ತಾಯಿ ಸೇರಿದಂತೆ ಅವರ ಕುಟುಂಬ ಸದಸ್ಯರು, ಗುರುವಾರ ಮಂಡ್ಯದಿಂದ ಬೆಳಗಾವಿಗೆ ತೆರಳಿ, ಮಗನನ್ನು ಭೇಟಿ ಮಾಡಿದರು.

ಮಗನ ಭೇಟಿ ಬಳಿಕ ಅಳಲು ತೋಡಿಕೊಂಡ ಕೈದಿಯ ತಾಯಿ ಪುಟ್ಟತಾಯಮ್ಮ ಅವರು, ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇಂದು ಬೆಳಗ್ಗೆಯಿಂದ ನನ್ನ ಮಗ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆದರೆ, ಅವನನ್ನು ಐಸಿಯುಗೆ ಶಿಫ್ಟ್ ಮಾಡುತ್ತಿಲ್ಲ, ಆರೈಕೆ ಮಾಡುತ್ತಿಲ್ಲ. ಮಗನನ್ನು ಭೇಟಿಯಾಗಲು ಬಿಡುತ್ತಿಲ್ಲ. ಮಗನ ಸ್ಥಿತಿ ಹೇಗಿದೆ ಎಂಬುದನ್ನು ಜೈಲಿನ ಅಧಿಕಾರಿಗಳು ತಿಳಿಸುತ್ತಿಲ್ಲ. ಪತ್ರಿಕೆಯೊಂದರ ಸುದ್ದಿ ನೋಡಿ ನಮಗೆ ಮಾಹಿತಿ ತಿಳಿಯಿತು ಎಂದು ಹೇಳಿದ್ದಾರೆ.

ಜೈಲುಗಳ ಇತರೆ ಕೈದಿಗಳ ಸಹಾಯದಿಂದ ಮಗನ ಹತ್ಯೆಗೆ ಯತ್ನ ನಡೆಸಲಾಗುತ್ತಿದೆ. "ಕೈದಿಯೊಬ್ಬನಿಗೆ ಜೈಲಿನಲ್ಲಿ ಸ್ಕ್ರೂಡ್ರೈವರ್ ಸಿಕ್ಕಿದ್ದು ಹೇಗೆ? ಕಣ್ಣಿಗೆ ಖಾರದ ಪುಡಿ ಎರಚಿ ಕೊಲ್ಲಲು ಯತ್ನಿಸಿದ್ದು ಏಕೆ? ಎಂದು ದಾಳಿ ಮಾಡಿದ ಕೈದಿಯನ್ನು ಸೈಕೋಪಾತ್ ಎಂದು ಹೇಳಿದ ಜೈಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

SCROLL FOR NEXT