ರಾಜ್ಯ

ಡಿಸೆಂಬರ್ ವೇಳೆಗೆ 225 ವಾರ್ಡ್'ಗಳ ಚುನಾವಣೆ: ಸಚಿವ ರಾಮಲಿಂಗಾ ರೆಡ್ಡಿ

Manjula VN

ಬೆಂಗಳೂರು: ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆಯು ಡಿಸೆಂಬರ್ ವೇಳೆಗೆ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಶಾಂತಿನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್‌ಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ. ಅಲ್ಲದೆ, ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ದೆಹಲಿ ಭೇಟಿಯ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ಗುರಿ ನೀಡಲಾಗಿದೆ. ಆದಷ್ಟು ಬೇಗ ಅಭ್ಯರ್ಥಿ ಘೋಷಣೆ ಮಾಡುವಂತೆ ಮನವಿ ಮಾಡಲಾಗಿದ್ದು, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ, ಕಾರ್ಯಾಧ್ಯಕ್ಷ, ಬ್ಲಾಕ್ ಅಧ್ಯಕ್ಷ ,ಜಿಲ್ಲಾಧ್ಯಕ್ಷರ ನೇಮಕಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಹೋಲಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಕೋಮುಗಲಭೆ ನಡೆದಿದೆ. ಬಿಜೆಪಿ ಅವಧಿಯಲ್ಲೇ ಹೆಚ್ಚು ಆಗಿದೆ. ಇನ್ನೂ, ಪೊಲೀಸರ ಸಭೆಯಲ್ಲಿ ಯತೀಂದ್ರ ಇದ್ದರೆಂಬ ಕುಮಾರಸ್ವಾಮಿ ಹೇಳಿಕೆಗೆ ಯತೀಂದ್ರ ಅವರೇ ಉತ್ತರ ಕೊಡಬೇಕು ಎಂದ ಅವರು, ತಸ್ತಿಕ್ ಹಣ ನೇರವಾಗಿ ಅರ್ಚಕರ ಅಕೌಂಟ್ ಗೆ ವರ್ಗಾವಣೆಗೆ ಸೂಚನೆ ಕೊಟ್ಟಿದ್ದೇನೆ. ಅರ್ಚಕರ ವೇತನ ಪರಿಷ್ಕರಣೆ ಸದ್ಯಕ್ಕೆ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಆಚಾರ ವಿಲ್ಲದ ನಾಲಿಗೆ ಎನ್ನುವ ವಚನದಂತೆ ಬಿಜೆಪಿ ನಾಯಕರಿಗೆ ಸಂಸ್ಕೃತಿ ಇಲ್ಲ. ಬಿಜೆಪಿ ಹೇಳೋದು ರಾಮನ ಹೆಸರು ಮಾಡೋದು ರಾವಣನ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರಗ ಬಾಯಿ ಬಿಟ್ಟರೆ ಬರೀ ಅವಿವೇಕ, ಅಜ್ಞಾನದ ಮಾತುಗಳು ಬರುತ್ತವೆ.ಎಐಸಿಸಿ ಅಧ್ಯಕ್ಷರ ಬಣ್ಣದ ಬಗ್ಗೆ ಮಾತನಾಡಿದ್ದು ಸರಿಯಲ್ಲ.ಉತ್ತರ ಕರ್ನಾಟಕ, ಬಿಸಿಲು ನಾಡಿನ ಜನಸಮೂಹಕ್ಕೆ ಅಪಮಾನ ಮಾಡಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ಮಾಡಿರೋ ಅಪಮಾನ.ಕಪ್ಪಾಗಿರುವವರು ಮನುಷ್ಯರಲ್ಲವೇ ಎಂದು ಪ್ರಶ್ನೆ ಮಾಡಿದರು.

ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವಬಿಜೆಪಿಗೆ ಮನುಷ್ಯತ್ವ, ಮಾನವೀಯತೆ ಇಲ್ಲ. ಬಿಜೆಪಿ ಬಾಯಿ ಬಿಟ್ಟರೆ ರೈಲು ಬಿಡುವ ಕೆಲ್ಸ ಮಾಡುತ್ತಾರೆ.ಜ್ಞಾನೇಂದ್ರ ತಲೆಯಲ್ಲಿ ಕೂದಲುಇದೆ ಆದರೆ ಮಿದುಳು ಇಲ್ಲ.ಕೂಡಲೇ ಆರಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

SCROLL FOR NEXT