ರಾಜ್ಯ

ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಮಂಡನೆ: ಶಾಸಕ ಎ.ಎಸ್.ಪೊನ್ನಣ್ಣ

Manjula VN

ಮಡಿಕೇರಿ: ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಮಂಡಿಸುವ ಮೂಲಕ ವಕೀಲರ ಬಹಕಾಲದ ಬೇಡಿಕೆ ಈಡೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾನುವಾರ ಹೇಳಿದರು.

ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಲಯನ್ಸ್ ಸಭಾಂಗಣದಲ್ಲಿ ಜರುಗಿದ ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕರು ಮಾತನಾಡಿದರು.

ಅನೇಕ ರಾಜ್ಯಗಳಲ್ಲಿ ಈಗಾಗಲೇ ವಕೀಲರ ಭದ್ರತೆಗಾಗಿ ರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಈ ಕಾಯ್ದೆ ಜಾರಿಗೆ ಅನೇಕ ವರ್ಷಗಳಿಂದ ವಕೀಲ ಸಮುದಾಯದ ಒತ್ತಾಯವಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕಾಯ್ದೆಗೆ ಅಂತಿಮ ರೂಪು ನೀಡಲಾಗಿದ್ದು ಮುಂದಿನ ಅದಿವೇಶನದಲ್ಲಿ ಕಾಯ್ದೆ ಮಂಡಿಸಿ ಜಾರಿಗೊಳಿಸಲಾಗುತ್ತದೆ. ಆ ಮೂಲಕ ವೈದ್ಯರಂತೆಯೇ ವಕೀಲರ ಸುರಕ್ಷತೆಗೆ ಕೂಡ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ರಾಜ್ಯ ವಕೀಲರ ಪರಿಷತ್ತು ಮಸೂದೆ ಜಾರಿಗೆ ಒತ್ತಾಯಿಸಿದೆ. ವಕೀಲರ ಕೆಲಸ ಗೌರವಯುತವಾದದ್ದು ಎಂದ ಅವರು, ನ್ಯಾಯಾಲಯಗಳ ಗೌರವ ಕಾಪಾಡುವುದು ವಕೀಲರ ಕರ್ತವ್ಯ ಎಂದು ತಿಳಿಸಿದರು.

ಕಾನೂನು ಸಲಹೆಗಾರ ಹುದ್ದೆಗೆ ನಾನು ಲಾಬಿ ಮಾಡಿಲ್ಲ. ಆದರೆ ವಕೀಲನಾಗಿ ಗಳಿಸಿದ ಗೌರವದಿಂದ ನನಗೆ ಆ ಸ್ಥಾನವನ್ನು ನೀಡಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು, ನಗರದ ನೂತನ ನ್ಯಾಯಾಲಯ ಸಂಕೀರ್ಣದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಸಮಾರಂಭದಲ್ಲಿ ವಕೀಲರು ತಮ್ಮ ಭಿನ್ನಾಭಿಪ್ರಾಯದ ಧ್ವನಿ ಎತ್ತಲು ಸ್ವತಂತ್ರರು ಎಂದು ಹೇಳಿದರು.

SCROLL FOR NEXT