ರಾಜ್ಯ

ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಪೂರ್ವ ಯೋಜಿತ ಕೃತ್ಯ: ಆಪ್ ಆರೋಪ

Manjula VN

ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲದಲ್ಲಿ ಸಂಭವಿಸಿದ ಅಗ್ನಿ ಅವಘಡ ಪೂರ್ವ ಯೋಜಿತ ಕೃತ್ಯ. ರೂ.20 ಸಾವಿರ ಕೋಟಿ ಮೊತ್ತದ ಹಗರಣದ ದಾಖಲೆಗಳ ನಾಶಪಡಿಸುವ ಯತ್ನ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ಅಗ್ನಿ ಅವಘಡ ಹಿನ್ನೆಲೆಯಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ಮಾಧ್ಯಮ ವಕ್ತಾರೆ ಉಷಾ ಮೋಹನ್ ಸೇರಿದಂತೆ ಮುಖಂಡರು ಶುಕ್ರವಾರ ರಾತ್ರಿ ಬಿಬಿಎಂಪಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಅವರು, ಈ ಅಗ್ನಿ ಅವಘಡ ಪೂರ್ವ ಯೋಜಿತ ಕೃತ್ಯ ಎಂಬುದು ನಮ್ಮ ಬಲವಾದ ಶಂಕೆ. ಕೋಟ್ಯಾಂತರ ವ್ಯವಹಾರಗಳ ದಾಖಲೆಗಳನ್ನು ಸಂಗ್ರಹಿಸಿದ್ದ ಕೊಠಡಿಗೂ ಬೆಂಕಿ ತಗುಲಿರುವ ಸಾಧ್ಯತೆಯಿದೆ. ಈ ಬಗ್ಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ನಗರೋತ್ಶಾನ ಯೋಜನೆಯಡಿ ರೂ.20 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರು. ಈ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎಂದಿರುವ ಡಿಸಿಎಂ ಡಿಕೆ.ಶಿವಕುಮಾರ್, ಎಲ್ಲಾ ರೀತಿಯ ತನಿಖೆ ನಡೆಸುತ್ತೇವೆಂದು ಎಂದು ತಿಳಿಸಿದರು. ತನಿಖೆ ಎಂದರೆ, ಸಂಬಂಧಪಟ್ಟ ದಾಖಲೆಗಳಿರುವ ರೆಕಾರ್ಡ್ ರೂಮ್ ಸುಟ್ಟುಹೋಗುವಂತೆ ಮಾಡುವುದೇ ಎಂದು ಪ್ರಶ್ನಿಸಿದರು.

ಬಿಬಿಎಂಪಿ ಮುಖ್ಯ ಕಚೇರಿಯಂತಹ ಪ್ರಮುಖ ಸ್ಥಳದಲ್ಲಿ ಪ್ರಾಥಮಿಕ ಆದ್ಯತೆಯಾಗಿರುವ ಅಗ್ನಿ ಸುರಕ್ಷತೆಯೇ ಇಲ್ಲ. ಗಾಯಾಳುಗಳನ್ನು ಆ್ಯಂಬುಲೆನ್ಸ ವ್ಯವಸ್ಥೆ ಇಲ್ಲದೆ ಹೊಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂದರೆ ಏನರ್ಥ? ಇದನ್ನೆಲ್ಲಾ ಗಮನಿಸಿದರೆ, ಈ ಅಗ್ನಿ ಅವಘಡ ಕೋಟ್ಯಾಂತರ ರುಪಾಯಿ ಮೌಲ್ಯದ ದಾಖಲೆಗಳನ್ನು ನಾಶ ಮಾಡುವುದಕ್ಕಾಗಿ ನಡೆಸಿರುವ ಪೂರ್ವ ಯೋಜಿತ ಕೃತ್ಯವೆಂಬುದು ಕಂಡು ಬರುತ್ತಿದೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

SCROLL FOR NEXT