ರಾಜ್ಯ

ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಬಹುತೇಕ ರೋಗಿಗಳ ಆರೋಗ್ಯ ಸ್ಥಿರ, ಇಬ್ಬರ ಸ್ಥಿತಿ ಗಂಭೀರ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಕೊಠಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ನಿರ್ದೇಶಕ ಡಾ. ರಮೇಶ್ ಕೃಷ್ಣ ಕೆ ಅವರು ಮಾತನಾಡಿ, ಎಲ್ಲಾ ರೋಗಿಗಳ ಸ್ಥಿತಿ ಸ್ಥಿರವಾಗಿದೆ. ಆದರೆ, ಕಿರಣ್ (26) ಮತ್ತು ಶಿವಕುಮಾರ್ (45)ಎಂಜಿನಿಯರ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ರಾಸಾಯನಿಕ ಮಿಶ್ರಿತ ಗಾಳಿಯನ್ನು ಉಸಿರಾಡಿರುವುದರಿಂದ ಶ್ವಾಸಕೋಶದಲ್ಲಿ ಉರಿಯೂತ ಉಂಟಾಗಿದೆ. ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಚಿಕಿತ್ಸೆಗಳನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 11 ರಂದು ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡಕ್ಕೆ ಬೆಂಕಿ ತಗುಲಿತ್ತು. ಪರಿಣಾಮ 7 ಮಂದಿ ಗಾಯಗೊಂಡಿದ್ದರು.

ಶಿವಕುಮಾರ್(ಮುಖ್ಯ ಎಂಜಿನಿಯರ್‌). ಕಿರಣ್ ಸಂತೋಷ್ ಕುಮಾರ್ ವಿಜಯಮಾಲ (ಕಾರ್ಯಪಾಲಕ ಎಂಜಿನಿಯರ್‌), ಶ್ರೀಧರ್(ಸಹಾಯಕ ಕಾರ್ಯಪಾಲಕ ಎಂಜಿನಿಯರ್‌), ಸಿರಾಜ್‌ ‍(ಪ್ರಥಮ ದರ್ಜೆ ಸಹಾಯಕ), ಜ್ಯೋತಿ(ಆಪರೇಟರ್), ಶ್ರೀನಿವಾಸ್ (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್), ಮನೋಜ್‌(ಗಣಕ ಯಂತ್ರ ನಿರ್ವಾಹಕ) ಎಂಬುವವರು ಗಾಯಗೊಂಡಿದ್ದರು.

SCROLL FOR NEXT