ರಾಜ್ಯ

ಇಸ್ರೋ ಅಧ್ಯಕ್ಷರು, ಚಂದ್ರಯಾನ-3 ಮಿಷನ್ ತಂಡವನ್ನು ಸನ್ಮಾನಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

Ramyashree GN

ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ಚಂದ್ರಯಾನ-3 ಮಿಷನ್‌ ಯಶಸ್ಸು ಕಂಡಿದ್ದಕ್ಕೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡವನ್ನು ಅಭಿನಂದಿಸಿದರು.

ಗೆಹ್ಲೋಟ್ ಅವರು ಇಸ್ರೋ ಕೇಂದ್ರ ಕಚೇರಿಗೆ ತೆರಳಿ ಭಾರತಕ್ಕೆ ಹೆಮ್ಮೆ ತಂದ ಚಂದ್ರಯಾನ-3 ತಂಡವನ್ನು ಅಭಿನಂದಿಸಿದರು.
ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನೆಯನ್ನು ಮುಂದುವರೆಸುವ ನಿರಂತರ ಅನ್ವೇಷಣೆಗಾಗಿ ಸೋಮನಾಥ್ ಮತ್ತು ಅವರ ತಂಡದ ಸಮರ್ಪಿತ ಮನೋಭಾವವನ್ನು ರಾಜ್ಯಪಾಲರು ಶ್ಲಾಘಿಸಿದರು.

ಅವರ ಅಚಲ ಬದ್ಧತೆಯು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ ಮಾತ್ರವಲ್ಲದೆ ಜಾಗತಿಕ ಬಾಹ್ಯಾಕಾಶ ವೇದಿಕೆಯಲ್ಲಿ ಭಾರತದ ಪರಾಕ್ರಮವನ್ನು ಪ್ರದರ್ಶಿಸಿದೆ ಎಂದು ರಾಜಭವನದ ಹೇಳಿಕೆಯಲ್ಲಿ ತಿಳಿಸಿದೆ.

ಅವರ ನಿರಂತರ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲು ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲು ಮುಂದುವರಿಯುತ್ತದೆ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆ ಬರೆದಿದೆ. ಆಗಸ್ಟ್ 23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡಲ್ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.

ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು. 

ಭಾರತವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಿದೆ. ಈ ಮೊದಲು ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಚಂದ್ರಯಾನದಲ್ಲಿ ಯಶಸ್ಸನ್ನು ಕಂಡಿದ್ದವು. ಅವು ಚಂದ್ರನ ಉತ್ತರ ಧ್ರುವದ ಮೇಲೆ ಇಳಿದಿದ್ದವು.

SCROLL FOR NEXT