ಬೆಂಗಳೂರು: ಗ್ಯಾರಂಟಿ ಯೋಜನೆಗಳ ವಿರುದ್ಧ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ನೀಡಿದ್ದ ಸಲಹೆಗೆ ಕಾಂಗ್ರೆಸ್ ಸರ್ಕಾರದ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮೂರ್ತಿ ಅವರು ಸಹಾನುಭೂತಿಯ ಬಂಡವಾಳಶಾಹಿ ಇರಬೇಕು ಎಂದು ಹೇಳಿದ್ದಾರೆ, ಆದರೆ ಕೆಲವು ಕಂಪನಿಗಳು ಮಾತ್ರ ಅದನ್ನು ಪ್ರದರ್ಶಿಸುತ್ತಿವೆ. ಸಹಾನುಭೂತಿಯ ಬಂಡವಾಳಶಾಹಿ ಇದ್ದಿದ್ದರೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ತಿದ್ದುಪಡಿ) ಕಾಯಿದೆಯನ್ನು ತರುವ ಅಗತ್ಯ ಏನಿತ್ತು?" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ: ಗ್ಯಾರಂಟಿ ಯೋಜನೆಗಳ ಬಗ್ಗೆ ನಾರಾಯಣ ಮೂರ್ತಿ ಆಕ್ಷೇಪಕ್ಕೆ ಪ್ರಿಯಾಂಕ್ ಖರ್ಗೆ ತರಾಟೆ
ಇದಲ್ಲದೆ, ಕಳೆದ ದಶಕದ ಬಡತನ ಸೂಚ್ಯಂಕವನ್ನು ಪರಿಗಣನೆಗೆ ತೆಗೆದುಕೊಂಡರೆ, ಬಡವರು ಬಡವರಾಗುತ್ತಿರುವುದನ್ನು ನೋಡಬಹುದು. ಸಾರ್ವತ್ರಿಕ ಮೂಲ ಆದಾಯವು ಅಧ್ಯಯನ ಮತ್ತು ಸಂಶೋಧನೆಗಳನ್ನು ಆಧರಿಸಿದೆ. ಇದು ಮಾನವ ಸಂಪನ್ಮೂಲಗಳ ಹೂಡಿಕೆಯಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಅಪ್ರಸ್ತುತವಾಗಿದ್ದರೆ, ಗೃಹಲಕ್ಷ್ಮಿ ಯೋಜನೆಗೆ ಒಂದು ಕೋಟಿಗೂ ಹೆಚ್ಚು ನೋಂದಣಿಗಳು ಹೇಗೆ ಬಂದವು?" ಎಂದು ಪ್ರಶ್ನಿಸಿದ ಅವರು, ಸರ್ಕಾರದ ಯೋಜನೆಗಳಿಂದಾಗಿ ಹಲವಾರು ಸಾಮಾಜಿಕ ಯಶಸ್ಸಿನ ಕಥೆಗಳಿವೆ, ಆದರೆ ಅವುಗಳು ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಮತ್ತು ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. "ಅವರ ಸಲಹೆಗಳು ಜನರ ಅಭಿವೃದ್ಧಿಯ ಭಾಗವಾಗಿದೆ. ಇದು ಅಂತಿಮವಾಗಿ ಸರ್ಕಾರದ ನಿರ್ಧಾರವಾಗಿದೆ. ಬೆಲೆ ಏರಿಕೆಯ ದೃಷ್ಟಿಯಿಂದ ರೈತರು ಮತ್ತು ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ" ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ: ಯಾವುದನ್ನೂ ಫ್ರೀಯಾಗಿ ಕೊಡಬಾರದು, ಕೊಟ್ಟರೆ ಪಡೆದುಕೊಂಡವರು ಸಮಾಜದ ಒಳಿತಿಗೆ ಏನಾದರೂ ಮಾಡಬೇಕು: ನಾರಾಯಣ ಮೂರ್ತಿ
ಯಾವುದನ್ನೂ ಉಚಿತವಾಗಿ ನೀಡಬಾರದು ಎಂಬ ಧೋರಣೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ಸಿ ಮಹದೇವಪ್ಪ ಮೈಸೂರಿನಲ್ಲಿ ಹೇಳಿದ್ದಾರೆ. "ನಾರಾಯಣ ಮೂರ್ತಿ ಅವರು ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ, ಆದರೆ ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆ ಮತ್ತು ಬಡತನ ನಿರ್ಮೂಲನೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.