ರಾಜ್ಯ

ಭ್ರೂಣಹತ್ಯೆ ಜಾಲ: ವೈದ್ಯಕೀಯ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಕರ್ನಾಟಕ ಸರ್ಕಾರ ಕಠಿಣ ಕ್ರಮ

Srinivasamurthy VN

ಮಂಡ್ಯ: ಮಂಡ್ಯ ಜಿಲ್ಲೆಯ ದೂರದ ಗ್ರಾಮದಲ್ಲಿರುವ ಆಲೆಮನೆಯೊಂದರಲ್ಲಿ ಸ್ಥಾಪಿಸಲಾಗಿದ್ದ ಘಟಕದಲ್ಲಿ ಹೆಣ್ಣು ಭ್ರೂಣಗಳ ಪತ್ತೆ ಮತ್ತು ಅವುಗಳ ನಾಶ ಜಾಲ ಬಯಲಾದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಬುಧವಾರ ವೈದ್ಯಕೀಯ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೆಂಕಟಸ್ವಾಮಿ, ಪಾಂಡವಪುರ ಉಪವಿಭಾಗದ ಸಹಾಯಕ ಆಯುಕ್ತ ನಂದೀಶ್‌ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಅವರು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದ ಸ್ಕ್ಯಾನಿಂಗ್ ಕೇಂದ್ರಗಳನ್ನು ಸೀಲ್ ಮಾಡಿದರು. ದಾಖಲೆಗಳು ನವೀಕರಣಗೊಳ್ಳದ ಕೇಂದ್ರಗಳಿಗೆ ನೋಟಿಸ್ ನೀಡಿದ್ದಾರೆ.

900 ಕ್ಕೂ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಸಿದ ಆರೋಪದ ಮೇಲೆ ವೈದ್ಯರು, ದಾದಿಯರು ಮತ್ತು ಏಜೆಂಟರು ಸೇರಿದಂತೆ 10 ಜನರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಗ್ಯಾಂಗ್ ಗರ್ಭಿಣಿಯರನ್ನು ಸಂಪರ್ಕಿಸಿ ಲಿಂಗ ನಿರ್ಣಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸುತ್ತಿದ್ದರು, ಇದಕ್ಕಾಗಿ 20,000 ರಿಂದ 25,000 ರೂ.ವರೆಗೆ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಸಮೀಪದ ಕಬ್ಬಿನ ತೋಟದಲ್ಲಿದ್ದ ಆಲೆ ಮನೆಯಲ್ಲಿ ಈ ಗ್ಯಾಂಗ್ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಅಲ್ಲಿ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಇರಿಸಲಾಗಿತ್ತು, "ಪರೀಕ್ಷೆಯಲ್ಲಿ ಹೆಣ್ಣು ಮಗು ಪತ್ತೆಯಾದರೆ, ಅವರು ಅದನ್ನು ಗರ್ಭಪಾತ ಮಾಡಲು ಬಯಸುತ್ತೀರಾ ಎಂದು ಅವರು ಆ ಮಹಿಳೆಯರನ್ನು ಕೇಳುತ್ತಿದ್ದರು. ಮಹಿಳೆಯರು ಒಪ್ಪಿಗೆ ಸೂಚಿಸಿದ ಬಳಿಕ ತಂಡವು ಸುಮಾರು 50 ಸಾವಿರ ರೂ. ಪಡೆದು ಗರ್ಭಪಾತ ಮಾಡುತ್ತಿದ್ದರು. ಈ ಗ್ಯಾಂಗ್ ಕನಿಷ್ಠ 900 ಹೆಣ್ಣು ಭ್ರೂಣ ಹತ್ಯೆಗಳನ್ನು ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 

SCROLL FOR NEXT