ರಾಜ್ಯ

ಸುಳ್ಳು ಪ್ರಕರಣ ಸೃಷ್ಟಿಸಿ 72 ಲಕ್ಷ ರೂಪಾಯಿ ದುರ್ಬಳಕೆ: ಇನ್ಸ್‌ಪೆಕ್ಟರ್‌ ಅಮಾನತು, ಸಹಾಯಕನ ಬಂಧನ

Manjula VN

ಬೆಂಗಳೂರು: ಸುಳ್ಳು ಪ್ರಕರಣ ಸೃಷ್ಟಿಸಿ 72 ಲಕ್ಷ ರೂಪಾಯಿ ಲಪಟಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇನ್ಸ್‌ಪೆಕ್ಟರ್‌ ಸಹಾಯಕನನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. ಇದೇ ವೇಳೆ ಆರೋಪ ಹೊತ್ತಿರುವ ರಾಮನಗರ ಜಿಲ್ಲೆ ಬಿಡದಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ ಅವರೂ ಅಮಾನತುಗೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎರಡನೇ ಆರೋಪಿಯನ್ನು ಲೋಕನಾಥ್ ಸಿಂಗ್ ಎಂದು ಗುರ್ತಿಸಲಾಗಿದೆ. ಈ ಬೆಳವಣಿಗೆ ಬೆನ್ನಲೆ ಅಮಾನತುಗೊಂಡಿರುವ ಇನ್‌ಸ್ಪೆಕ್ಟರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ಪಿಐ ಆಗಿದ್ದಾಗ ಶಂಕರ್‌ ನಾಯಕ ಅವರು ಸುಳ್ಳು ಪ್ರಕರಣ ಸೃಷ್ಟಿಸಿ 72 ಲಕ್ಷ ರುಪಾಯಿ ಲಪಟಾಯಿಸಿದ್ದರು. ಈ ಬಗ್ಗೆ ಬೆಂಗಳೂರು ನಗರ ಪೊಲೀಸರ ವರದಿ ಆಧರಿಸಿ ಬಿಡದಿ ಠಾಣೆ ಪಿಐ ಶಂಕರ್ ನಾಯಕ್ ಅವರನ್ನು ಕೇಂದ್ರ ವಲಯ ಐಜಿಪಿ ಡಾ। ಬಿ.ಆರ್‌.ರವಿಕಾಂತೇಗೌಡ ಬುಧವಾರ ಅಮಾನತುಗೊಳಿಸಿದ್ದಾರೆ.

2022ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕಳ್ಳತನ ಪ್ರಕರಣದಲ್ಲಿ ಉದ್ಯಮಿ ಹರೀಶ್ ಎಂಬುವರ ಕಾರು ಚಾಲಕ ಸಂತೋಷ್‌ನನ್ನು ಬಂಧಿಸಿ ರೂ.72 ಲಕ್ಷವನ್ನು ಶಂಕರ್ ನಾಯಕ್ ಜಪ್ತಿ ಮಾಡಿದ್ದರು. ಆದರೆ, ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಅವರು ಸ್ವಂತಕ್ಕೆ ಬಳಸಿಕೊಂಡ ಆರೋಪ ಕೇಳಿ ಬಂದಿತ್ತು. ಈ ಹಣ ಸಂಬಂಧ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿದ ಬಳಿಕ ಚೀಲದಲ್ಲಿ ಹಣವನ್ನು ತುಂಬಿ ಠಾಣೆಗೆ ತಂದಿಟ್ಟು ಶಂಕರ್ ತೆರಳಿದ್ದರು.

ಕೊನೆಗೆ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಅವರ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ ಎಫ್‌ಐಆರ್ ದಾಖಲಾಯಿತು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಸಿಬಿ ಪೊಲೀಸರು, ಮಧ್ಯವರ್ತಿ ಲೋಕನಾಥ್ ಸಿಂಗ್‌ನನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಲೋಕನಾಥ್ ಸಿಂಗ್ ರಿಯಲ್ ಎಸ್ಟೇಟ್ ಏಜೆಂಟ್ ಎಂದು ಬಿಂಬಿಸಿಕೊಂಡಿದ್ದು, ರೈಸ್ ಪುಲ್ಲಿಂಗ್ ಹಗರಣದಲ್ಲೂ ಈತ ಭಾಗಿಯಾಗಿದ್ದಾನೆನ್ನಲಾಗಿದೆ. ಹಲವು ವರ್ಷಗಳಿಂದ ಶಂಕರ್ ನಾಯಕ್‌ನ ಅಕ್ರಮ ಚಟುವಟಿಕೆಗಳಿಗೆ ಡೀಲ್ ಮಾಸ್ಟರ್ ಆಗಿದ್ದ ಎಂಬ ಮಾತುಗಳು ಕೇಳಿ ಬಂದಿವೆ.

ಈ ಹಿಂದೆ ಕುದೂರು ಹಾಗೂ ತಾವರೆಕೆರೆ ಠಾಣೆಯಲ್ಲಿ ಪಿಎಸ್‌ಐ ಶಂಕರ್ ನಾಯಕ್ ಕರ್ತವ್ಯ ನಿರ್ವಹಿಸಿದ್ದರು. ಆಗ ಶಂಕರ್ ನಾಯಕ್ ಸೂಚನೆ ಮೇರೆಗೆ ಕೆಲವು ಕಾನೂನು ಬಾಹಿರ ಹಣಕಾಸು ವ್ಯವಹಾರದಲ್ಲಿ ಲೋಕನಾಥ್ ಸಿಂಗ್ ಪಾತ್ರವಹಿಸಿದ್ದ ಎನ್ನಲಾಗಿದೆ.

ಲೋಕನಾಥ್ ಸಿಂಗ್ ಶಂಕರ್ ನಾಯಕ್ ಅವರಿಗೆ ಮಾಹಿತಿದಾರನಾಗಿಯೂ ಕೆಲಸ ಮಾಡುತ್ತಿದ್ದ. ಅಪಾರ ಪ್ರಮಾಣದ ಹಣ ಒಳಗೊಂಡ ಪ್ರಕರಣಗಳು ಪತ್ತೆಯಾದರೆ, ಈತ ಶಂಕರ್ ನಾಯಕ್ ನನ್ನು ಸಂಪರ್ಕಿಸುತ್ತಿದ್ದ. ಬಳಿಕ ಶಂಕರ್ ನಾಯಕ್ ವಸೂಲಿ ಮಾಡಿದ್ದು ದೊಡ್ಡ ಮೊತ್ತವಾದರೆ, ಕಡಿಮೆ ಮೊತ್ತ ನಮೂದಿಸಿ ಎಫ್ಐಆರ್ ದಾಲಿಸುತ್ತಿದ್ದ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ತನಿಖೆ ವೇಳೆ ಲೋಕನಾಥ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಲ್ಲಿ ಅಧಿಕೃತ ವ್ಯವಹಾರಸ್ಥ ಎಂದು ನಕಲಿ ಡಿಜಿಟಿಲ್ ದಾಖಲೆಗಳನ್ನು ಇಟ್ಟುಕೊಂಡಿರುವುದೂ ಕೂಡ ಪತ್ತೆಯಾಗಿದೆ. ರೈಸ್ ಪುಲ್ಲಿಂಗ್ ಹಗರಣಗಳಲ್ಲಿ ಜನರನ್ನು ಸೆಳೆಯಲು ಈತ ಈ ದಾಖಲೆಗಳನ್ನು ಬಳಕೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

SCROLL FOR NEXT