

ಚೆನ್ನೈ: 2013ರ ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ್ದು, 10 ಲಕ್ಷ ರೂ ಶುಲ್ಕ ವಿಧಿಸಿದೆ.
2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ಕುಮಾರ್ ವಿರುದ್ಧ ದಾಖಲಿಸಿರುವ 100 ಕೋಟಿ ರೂ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಷಾಂತರಕ್ಕಾಗಿ 10 ಲಕ್ಷ ರೂ ಶುಲ್ಕ ಪಾವತಿಸುವಂತೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಧ್ಯಂತರ ಆದೇಶ ನೀಡುವಾಗ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್.ಎನ್ ಮಂಜುಳ ಅವರು ಈ ಆದೇಶ ನೀಡಿದ್ದಾರೆ.
ಶುಲ್ಕವೇಕೆ?
2025ರ ಅಕ್ಟೋಬರ್ 28ರ ಆದೇಶದ ಅನ್ವಯ, ಈ ಪ್ರಕರಣ ಸಂಬಂಧ ಸಿ.ಡಿ.ಗಳಲ್ಲಿರುವ ವಿಷಯಗಳನ್ನು ಲಿಖಿತ ರೂಪಕ್ಕೆ ತರುವ ಮತ್ತು ಭಾಷಾಂತರಿಸುವ ಕೆಲಸವನ್ನು ನ್ಯಾಯಾಲಯದ ಭಾಷಾಂತರಕಾರರು ವಹಿಸಿಕೊಂಡಿದ್ದಾರೆ. ಅದಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸುವ ಷರತ್ತಿನ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಿಡಿಗಳಲ್ಲಿರುವ ಮಾಹಿತಿಯನ್ನು ಲಿಖಿತ ರೂಪಕ್ಕೆ ತರಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಬೆರಳಚ್ಚುಗಾರ ಸತತವಾಗಿ ಮೂರರಿಂದ ನಾಲ್ಕು ತಿಂಗಳ ಕಾಲ ಶ್ರಮಿಸಬೇಕಾಗುತ್ತದೆ.
ಈ ಭಾಷಾಂತರ ಪ್ರಕ್ರಿಯೆಯು ಬೃಹತ್ ಕೆಲಸವಾಗಿದ್ದು, ಪೂರ್ಣಗೊಳಿಸಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಟೈಪಿಸ್ಟ್ ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ತಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಮಂಜುಳಾ ಹೇಳಿದ್ದಾರೆ.
ಸಾಮಾನ್ಯವಾಗಿ ವಾದಿಗಳೇ ತಮ್ಮ ದಾವೆಗೆ ಪೂರಕವಾದ ದಾಖಲೆಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರುವುದರಿಂದ, ಈ ವೆಚ್ಚವನ್ನು ಧೋನಿ ಅವರೇ ಭರಿಸಬೇಕೆಂದು ಪೀಠ ಸ್ಪಷ್ಟಪಡಿಸಿದೆ.
ಗಡುವು
ಸಿ.ಡಿ.ಗಳಲ್ಲಿನ ವಿಷಯಗಳ ಲಿಖಿತ ರೂಪ ಮತ್ತು ಅನುವಾದ ಕಾರ್ಯವನ್ನು ಮಾರ್ಚ್ 2026 ರ ಮೂರನೇ ವಾರದೊಳಗೆ ಪೂರ್ಣಗೊಳಿಸುವಂತೆ ಭಾಷಾಂತರಕಾರರಿಗೆ ನ್ಯಾಯಮೂರ್ತಿಗಳು ನಿರ್ದೇಶಿದ್ದಾರೆ. ಅಂತೆಯೇ 10 ಲಕ್ಷ ರೂ ವೆಚ್ಚವನ್ನು ಮದ್ರಾಸ್ ಹೈಕೋರ್ಟ್ನ 'ಮುಖ್ಯ ನ್ಯಾಯಾಧೀಶರ ಪರಿಹಾರ ನಿಧಿ'ಗೆ ಮಾರ್ಚ್ 12ರೊಳಗೆ ಪಾವತಿಸಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ?
2013ರ ಐಪಿಎಲ್ ಪಂದ್ಯಗಳಲ್ಲಿನ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಧೋನಿ ಶಾಮೀಲಾಗಿದ್ದಾರೆ ಎಂದು ಜೀ ಮೀಡಿಯಾ ಮತ್ತು ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರು ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡಿದ್ದರು ಎಂದು ಆರೋಪಿಸಿ, ಎಂ.ಎಸ್. ಧೋನಿ 2014ರಲ್ಲಿ ಸಿವಿಲ್ ಮಾನಹಾನಿ ದಾವೆಯನ್ನು ಹೂಡಿದ್ದರು.
ಈ ಪ್ರಕರಣದಲ್ಲಿ ಪ್ರತಿವಾದಿಗಳು ಸಲ್ಲಿಸಿದ್ದ ಲಿಖಿತ ಹೇಳಿಕೆಗಳ ಕುರಿತೂ ಧೋನಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸಾಕ್ಷ್ಯಗಳ ಪರಿಶೀಲನೆ ಹಂತದಲ್ಲಿ, ದಾಖಲೆಗಳ ಭಾಷಾಂತರದ ಅವಶ್ಯಕತೆ ಎದುರಾಗಿರುವುದರಿಂದ ನ್ಯಾಯಾಲಯ ಈ ಆದೇಶ ನೀಡಿದೆ.
Advertisement