ರಾಜ್ಯ

ಕೆಇಎ ನೇಮಕಾತಿ ಪರೀಕ್ಷೆ ಹಗರಣ; ಆರ್‌ಡಿ ಪಾಟೀಲ್ ಸೇರಿ 12 ಆರೋಪಿಗಳ ವಿರುದ್ಧ ಕೆಸಿಒಸಿಎ ಕಾಯ್ದೆಯಡಿ ಪ್ರಕರಣ

Ramyashree GN

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಯನ್ನು ಜಾರಿಗೊಳಿಸಿದೆ.

ಗುರುವಾರ ಸಿಐಡಿ ಅಧಿಕೃತ ಹೇಳಿಕೆಯ ಪ್ರಕಾರ, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಮತ್ತು ಕಿಂಗ್‌ಪಿನ್ ಆರ್‌ಡಿ ಪಾಟೀಲ್ ವಿರುದ್ಧ ಕೆಸಿಒಸಿಎ ಜಾರಿಗೊಳಿಸಲಾಗಿದೆ. ಆರೋಪಿಗಳಾದ ಸಂತೋಷ ಕೊಟ್ಟಳ್ಳಿ, ಶಿವಕುಮಾರ, ಸಿದ್ರಾಮ ಕೋಳಿ, ರವಿಕುಮಾರ್, ರುದ್ರಗೌಡ, ರಹೀಮ್ ಚೌಧರಿ, ಸಾಗರ್, ಬಸಣ್ಣ ಪೂಜಾರಿ, ಚಂದ್ರಕಾಂತ ಬುರಕಲ್, ಶಶಿಧರ ಜಮಾದಾರ, ಬಸವರಾಜ ಯಳವರ ವಿರುದ್ಧವೂ ಈ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KEONICS) ಮತ್ತು ಇತರ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಎಫ್‌ಡಿಎ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜುಲೈ 28, 2023 ರಂದು ಕೆಇಎ ನಡೆಸಿದ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಿಐಡಿ ಈ ಪ್ರಕರಣಗಳ ಹೆಚ್ಚಿನ ತನಿಖೆ ನಡೆಸುತ್ತಿದೆ ಮತ್ತು ಹಲವಾರು ಆರೋಪಿಗಳನ್ನು ಬಂಧಿಸಿ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಕೆಸಿಒಸಿಎ ಎಂಬುದು ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕರ್ನಾಟಕವು 2000 ರಲ್ಲಿ ಜಾರಿಗೆ ತಂದ ಕಾನೂನಾಗಿದೆ. ಈ ಕಾಯ್ದೆಯನ್ನು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ, 1999 (ಎಂಸಿಒಸಿಎ) ಮಾದರಿಯಲ್ಲಿ ರಚಿಸಲಾಗಿದೆ.

SCROLL FOR NEXT