ರಾಜ್ಯ

ನಂಜನಗೂಡು: ಮೆರವಣಿಗೆ ವೇಳೆ ದೇವರ ಮೇಲೆ ಎಂಜಲು ನೀರು ಎಸೆದ ಐವರ ವಿರುದ್ಧ ಪ್ರಕರಣ ದಾಖಲು

Ramyashree GN

ಮೈಸೂರು: ಜಿಲ್ಲೆಯ ನಂಜನಗೂಡು ನಗರದಲ್ಲಿ ಬುಧವಾರ ನಡೆದ ಮೆರವಣಿಗೆ ವೇಳೆ ದೇವರ ಮೇಲೆ ಎಂಜಲು ನೀರನ್ನು ಎಸೆದ ಆರೋಪದ ಮೇಲೆ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ವಿವಾದ ಸೃಷ್ಟಿಯಾಗಿದ್ದುದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಐತಿಹಾಸಿಕ ನಂಜುಂಡೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್, ಅಭಿ ಎಂಬುವವರ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮೆರವಣಿಗೆ ವೇಳೆ ದೇವರ ಮೇಲೆ ಬಾಟಲಿ ನೀರು ಎಸೆದು ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಮೆರವಣಿಗೆಯಲ್ಲಿ ಯಾವುದೇ ವ್ಯಕ್ತಿಯನ್ನು ಅವಮಾನಿಸುವುದು ಸರಿಯಲ್ಲ ಎಂದು ನಾವು ವಿವರಿಸಿದ್ದೇವೆ. ಆದರೆ, ಕೆಲವು ವ್ಯಕ್ತಿಗಳು ಮೆರವಣಿಗೆಯ ಸಮಯದಲ್ಲಿ ದೇವರಿಗೆ ನೀರು ಎರಚಿದರು ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಂಗಳವಾರ ರಾತ್ರಿ ‘ಅಂಧಕಾಸುರ ಸಂಹಾರ’ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಬಳಿ ರಂಗೋಲಿಯಲ್ಲಿ ಚಿತ್ರಿಸಿದ ಅಂಧಕಾಸುರನ ಚಿತ್ರವನ್ನು ಅಳಿಸಿಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿತು. 

ಪದ್ಧತಿಯಂತೆ ನಂಜುಂಡೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತವರು ಮಹಿಷಾಸುರನ ಚಿತ್ರದ ಸುತ್ತ ಮೂರು ಸುತ್ತುಗಳನ್ನು ಹಾಕಿ ಆ ಚಿತ್ರವನ್ನು ಅಳಿಸಿ ತೇರಿನ ಬೀದಿಗಳಲ್ಲಿ ಮುಂದಕ್ಕೆ ಸಾಗಬೇಕು. ಇದನ್ನು ನೂರಾರು ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸಮರ್ಥಿಸಿಕೊಂಡಿತು. 

ಈ ವೇಳೆ ಆರೋಪಿಗಳು ದೇವರ ಮೇಲೆ ಕಲುಷಿತ ನೀರನ್ನು ಎಸೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಮೂಲಗಳು ವಿವರಿಸಿವೆ. ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.

SCROLL FOR NEXT