ರಾಜ್ಯ

ಆಟೋ ಚಾಲಕರ ಸುಲಿಗೆಗೆ ಬ್ರೇಕ್: ನಗರದಲ್ಲಿ ಶೀಘ್ರದಲ್ಲೇ 30 ಪ್ರಿಪೇಯ್ಡ್‌ ಆಟೋ ಸ್ಟ್ಯಾಂಡ್'ಗಳು ಆರಂಭ!

Manjula VN

ಬೆಂಗಳೂರು: ನಗರದಲ್ಲಿ ಆಟೋ ಚಾಲಕರು ಬೇಕಾಬಿಟ್ಟಿ ದುಡ್ಡು ಕೇಳುತ್ತಿದ್ದು, ಹಗಲು ದರೋಡೆ ಮಾಡುತ್ತಿದ್ದಾರೆ. ಇದಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಯಾಣಿಕರಿಗೆ ಈ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಂಡಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದು, ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ನಗರದಲ್ಲಿ 30 ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಗಳ ತೆರೆಯುವ ಗುರಿಯನ್ನು ಹೊಂದಲಾಗಿದ್ದು, ಬೇಡಿಕೆ ಹಾಗೂ ಹೆಚ್ಚೆಚ್ಚು ಜನರು ಸಂಚರಿಸುವ ಸ್ಥಳಗಳಲ್ಲಿ ಆಟೋ ಸ್ಟ್ಯಾಂಡ್ ಗಳ ತೆರೆಯಲು ಮುಂದಾಗಿದ್ದಾರೆ.

ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಗಳಿಗಾಗಿ ಸಂಚಾರಿ ಪೊಲೀಸರು ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಐಟಿಪಿಎಲ್, ಚನ್ನಸಂದ್ರ, ಕೋಣನಕುಂಟೆ, ಜ್ಞಾನಭಾರತಿ ಮತ್ತು ಇತರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳಗಳನ್ನು ಗುರ್ತಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್'ಸಿಎಲ್) ಸಹಯೋಗದೊಂದಿಗೆ ಬೆಂಗಳೂರು ಸಂಚಾರಿ ಪೊಲೀಸರು ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ಸೇಂಟ್ ಜಾನ್ಸ್ ಆಸ್ಪತ್ರೆ, ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ, ಮಾರತಹಳ್ಳಿ ಹೊರ ವರ್ತುಲ ರಸ್ತೆ ಜಂಕ್ಷನ್, ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ, ನಾಯಂಡಹಳ್ಳಿ ರಿಂಗ್ ರಸ್ತೆ ಜಂಕ್ಷನ್, ಸಜ್ಜನ್ ರಾವ್ ವೃತ್ತ, ಲಾಲ್‌ಬಾಗ್ ಪಶ್ಚಿಮ ಗೇಟ್, ಜಯನಗರ 4ನೇ ಬ್ಲಾಕ್, ನೆಲಗಡರನಹಳ್ಳಿ ಕ್ರಾಸ್ ಮತ್ತು ಪಿಇಎಸ್ ಕಾಲೇಜು, ಹೊರ ವರ್ತುಲ ರಸ್ತೆಯಲ್ಲೂ ಪ್ರೀಪೇಯ್ಡ್ ಆಟೋ ಸ್ಟ್ಯಾಂಡ್ ಗಳನ್ನು ತೆರೆಯಲು ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಗಮ್ಯಸ್ಥಾನದ ವಿವರಗಳು, ವಾಹನದ ಸಂಖ್ಯೆ ಮತ್ತು ಚಾಲಕನ ಹೆಸರನ್ನು ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್‌ಗಳಲ್ಲಿ ಹ್ಯಾಂಡ್‌ಹೆಲ್ಡ್ ಯಂತ್ರದಲ್ಲಿ ನಮೂದಿಸಲಾಗುತ್ತದೆ, ಅದು ರೂ 15/ಕಿಮೀ ದರದಲ್ಲಿ ಆಟೋ ದರವನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ರಶೀದಿಯನ್ನೂ ನೀಡಲಾಗುತ್ತದೆ.

ಎಡಿಜಿಪಿ ಮತ್ತು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂಎ ಸಲೀಂ ಅವರು ಮಾತನಾಡಿ, “ಈ ಹಿಂದೆ, ನಗರದಲ್ಲಿ 16 ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್‌ಗಳು ಇದ್ದವು. ಆದರೆ, ಅವು ಕೆಲವು ಕಾರಣಗಳಿಂದ ಕಾರ್ಯಾಚರಣೆಯನ್ನು ನಿಲ್ಲಿಸಿದ್ದವು. ಇದೀಗ ನಾವು ನಗರದಾದ್ಯಂತ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್‌ಗಳನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಸ್ಥಗಿತಗೊಂಡಿದ್ದ 14 ಸ್ಟ್ಯಾಂಡ್‌ಗಳನ್ನು ತೆರೆದಿದ್ದೇವೆ. ಬೇಡಿಕೆಯ ಆಧಾರದ ಮೇಲೆ ಮತ್ತಷ್ಟು ಆಟೋ ಸ್ಟ್ಯಾಂಡ್ ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಎಂಜಿ ರಸ್ತೆಯಂತಹ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು 200 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ. ಈ ಆಟೋ ಸ್ಟ್ಯಾಂಡ್‌ಗಳು ಚಾಲಕರು ನಿರಾಕರಿಸುವ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಂಬಂಧ ಸಂಚಾರ ಇಲಾಖೆಗೆ ಅನೇಕ ದೂರುಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.

SCROLL FOR NEXT