ರಾಜ್ಯ

ಕುರುಬರ ಮೀಸಲಾತಿ ಪರ ಸರ್ಕಾರವಿದೆ: ಸಿಎಂ ಬೊಮ್ಮಾಯಿ

Manjula VN

ಹೊಸಪೇಟೆ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ವರದಿ ಬಂದ ಕೂಡಲೇ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ, ಬಹುದಿನಗಳ ಹೋರಾಟಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.

ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ವಸತಿ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ಕುಲಶಾಸ್ತ್ರೀಯ ಅಧ್ಯಯನವು ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲಿಯೇ ವರದಿ ಬರುವ ನಿರೀಕ್ಷೆಗಳಿವೆ. ಎಲ್ಲಾ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡಿಸಲು ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.

ಮೀಸಲಾತಿ ವಿಚಾರ ಕುರಿತು ಈ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಆದರೆ, ಕೆಲ ಅಪೂರ್ಣ ಮಾಹಿತಿಯಿಂದಾಗಿ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಬಾರಿ ವಿಸ್ತೃತ ವರದಿ ಕಳುಹಿಸಿ ಕುರುಬ ಸಮುದಾಯಕ್ಕೆ ಒಳ್ಳೆಯ ಸುದ್ದಿ ನೀಡುವ ಭರವಸೆ ನಮಗಿದೆ ಎಂದು ತಿಳಿಸಿದರು.

''ನಮ್ಮ ಸರಕಾರ ಕುರುಬ ಸಮುದಾಯದ ಕಲ್ಯಾಣಕ್ಕಾಗಿ 350 ಕೋಟಿ ರೂ. ಮೀಸಲಿಟ್ಟಿದ್ದು, ಸಮುದಾಯಕ್ಕೆ ಇತರೆ ಯೋಜನೆಗಳನ್ನೂ ನೀಡಿದ್ದೇವೆ. ನಾವು ಯಾವಾಗಲೂ ಶಿಕ್ಷಣವನ್ನು ಬೆಂಬಲಿಸುತ್ತೇವೆ. ಜೀವನಶೈಲಿಯಲ್ಲಿ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಪಡೆಯಲು ಇದು ಏಕೈಕ ಮಾರ್ಗವಾಗಿದೆ ಎಂದರು.

SCROLL FOR NEXT