ರಾಜ್ಯ

ಮಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನಗರ ಪೊಲೀಸ್ ಆಯುಕ್ತರಿಂದ ಕಿರುಕುಳ- ಆರ್ ಟಿಐ ಕಾರ್ಯಕರ್ತ ಆರೋಪ

Nagaraja AB

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮತ್ತಿತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಮಾಡಿರುವ ಆರ್ ಟಿಐ ಕಾರ್ಯಕರ್ತ ಮೊಹಮ್ಮದ್ ಕಬೀರ್, ಈ ಪ್ರಕರಣದ ವಿಚಾರಣೆ ನೆಪದಲ್ಲಿ ತನಗೆ ಶಶಿಕುಮಾರ್ ಹಾಗೂ ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಕೆಆರ್ ಎಸ್ ರಾಜಕೀಯ ಪಕ್ಷದ ಸದಸ್ಯರು ಆಗಿರುವ ಕಬೀರ್, ಡ್ರಗ್ಸ್ ಮತ್ತು ಮರಳು ಮಾಫಿಯಾದಲ್ಲಿ ಲಂಚದ ಬೇಡಿಕೆಗಾಗಿ ಆರೋಪಕ್ಕಾಗಿ ಕಮೀಷನರ್ ಹಾಗೂ ಉಲ್ಲಾಳ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದಾಗಿನಿಂದಲೂ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ವಿಚಾರಣೆಗೆ ಬರುವಂತೆ ಪೊಲೀಸ್ ಇಲಾಖೆಯಿಂದ ಪದೇ ಪದೇ ಕರೆಗಳು ಬರುತ್ತಿವೆ. ತನ್ನ ಕುಟುಂಬಕ್ಕೂ ಕಿರುಕುಳ ನೀಡಲಾಗುತ್ತಿದೆ. ಲೋಕಾಯುಕ್ತ  ಸ್ವತಂತ್ರ್ಯ ತನಿಖೆ ನಡೆಸುವ ಬದಲು, ದೂರಿನಲ್ಲಿ ಆರೋಪಿಗಳೆಂದು ಉಲ್ಲೇಖಿಸಿರುವವರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿದ್ದು, ವರದಿ ಸಲ್ಲಿಸಲು ತಿಳಿಸಿದೆ ಎಂದರು.

ಈ ಪ್ರಕರಣದಿಂದ ಬಚಾವ್ ಆಗಲು ಆರೋಪಿತ ಪೊಲೀಸರು ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆ ಬಗ್ಗೆ ಭಯ ವ್ಯಕ್ತಪಡಿಸಿದ ಅವರು, ಪೊಲೀಸರನ್ನು ಆಗಾಗ್ಗೆ ತಮ್ಮ ಮನೆಗೆ ಕಳುಹಿಸಲಾಗುತ್ತಿದೆ. ನೋಟಿಸ್ ಮೇಲೆ ನೋಟಿಸ್ ನೀಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿನ ಭ್ರಷ್ಟಾಚಾರಕ್ಕೆ ನಗರ ಪೊಲೀಸ್ ಆಯುಕ್ತರೇ ನೇರ ಹೊಣೆ ಎಂದರು.

ಆರೋಪ ಸಾಬೀತಿಗೆ ಸಾಕ್ಷ್ಯಾಧಾರ ಸಾಬೀತುಪಡಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕಬೀರ್, ಉಲ್ಲಾಳ್ ಪೊಲೀಸ್ ಠಾಣೆಯಲ್ಲಿನ ಕಳೆದ 18 ತಿಂಗಳ ಅವಧಿ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಒತ್ತಾಯಿಸಿದ್ದೇನೆ. ಆದರೆ, ಇಲ್ಲಿಯವರೆಗೂ ಅದನ್ನು ನೀಡಿಲ್ಲ ಎಂದು  ತಿಳಿಸಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

SCROLL FOR NEXT