ರಾಜ್ಯ

ಹಿಟ್ ಅಂಡ್ ರನ್ ಪ್ರಕರಣ: ದಾವಣಗೆರೆಯಲ್ಲಿ ಅಪಘಾತ, ಬೈಕ್‌ನಲ್ಲಿದ್ದ ಮೂವರು ಯುವಕರ ಸಾವು

Ramyashree GN

ದಾವಣಗೆರೆ: ಜಿಲ್ಲೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಹೊರವಲಯದ ಆನಗೋಡು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ  ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರು ಶುಕ್ರವಾರ ತಡರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು 24 ವರ್ಷದ ಪರಶುರಾಮ್, 23 ವರ್ಷದ ಸಂದೇಶ್ ಮತ್ತು 26 ವರ್ಷದ ಶಿವು ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾವಣಗೆರೆ ಸಮೀಪದ ರಾಮನಗರ ನಿವಾಸಿಗಳು ಎನ್ನಲಾಗಿದೆ.

ಯುವಕರು ಕಾಟಿಹಳ್ಳಿ ಗ್ರಾಮಕ್ಕೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ಮೂವರು ಯುವಕರು ದಾವಣಗೆರೆ ತಾಲ್ಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯರ ಹೇಳಿಕೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಅಪಘಾತ ಮಾಡಿದ ವಾಹನದ ಬಗ್ಗೆ ಇದುವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

SCROLL FOR NEXT