ರಾಜ್ಯ

ಗದಗ: ಆಟೋ- ಮಿನಿ ಬಸ್ ನಡುವೆ ಭೀಕರ ಅಪಘಾತ; ಮೂರು ಮಂದಿ ಸ್ಥಳದಲ್ಲೇ ಸಾವು, 8 ಮಂದಿಗೆ ಗಾಯ

Shilpa D

ಗದಗ: ಭಾನುವಾರ ರಾತ್ರಿ ಬೆಟಗೇರಿ ಹೊರವಲಯದಲ್ಲಿ ಮಿನಿ ಬಸ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಸೈಯದ್ ಸೂದಿ (20), ಪ್ರದೀಪ್ ಪೂಜಾರ್ (40) ಮತ್ತು ನಿಖಿಲ್ ಮಂಜುನಾಥ ಮುಳಗುಂದ (20) ಎಂದು ಗುರುತಿಸಲಾಗಿದೆ. ಮಿನಿ ಬಸ್‌ನಲ್ಲಿದ್ದ ಎಂಟು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿ ಪ್ಯಾಸೆಂಜರ್ ಬಸ್ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬಾಗಲಕೋಟೆಯಿಂದ ಹೊರಟಿತ್ತು, ಆಟೋ ರಿಕ್ಷಾ ಬೆಟಗೇರಿಯಿಂದ ನರಸಾಪುರ ಗ್ರಾಮದ ಬಳಿಯ ದಂಡಿನ ದುರ್ಗಮ್ಮ ದೇವಸ್ಥಾನದ ಕಡೆಗೆ ಬರುತ್ತಿತ್ತು. ವೇಗವಾಗಿ ಬಂದ ಆಟೋ ಮಿನಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಿನಿ ಬಸ್‌ನಲ್ಲಿ ಗಾಯಗೊಂಡಿದ್ದ ಎಂಟು ಮಂದಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಮದುವೆ ಸಮಾರಂಭ ಮುಗಿಸಿ ಗದಗಕ್ಕೆ ವಾಪಸಾಗುತ್ತಿದ್ದೇವು ಎಂದು ಮಿನಿ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದರು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಅಪಘಾತ ಸಂಭವಿಸಿದಾಗ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು. ಹಠಾತ್ ಶಬ್ದ ಕೇಳಿದಾಗ ಎಲ್ಲರು ಬೆಚ್ಚಿಬಿದ್ದಿದ್ದಾಗಿ ತಿಳಿಸಿದ್ದಾರೆ.

ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದರು. ಮೃತರ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT