ರಾಜ್ಯ

ಬಜೆಟ್ ನಲ್ಲಿ ಘೋಷಣೆಯಾಗದ ತಾಲೂಕು: ಸಿಎಂ ಪ್ರತಿಕೃತಿ ದಹಿಸಿ, ಮಹಾಲಿಂಗಪುರದಲ್ಲಿ ಪ್ರತಿಭಟನೆ

Manjula VN

ಬಾಗಲಕೋಟೆ: ರಾಜ್ಯ ಬಜೆಟ್‌ನಲ್ಲಿ ಮಹಾಲಿಂಗಪುರವನ್ನು ಹೊಸ ತಾಲೂಕನ್ನಾಗಿ ಘೋಷಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆ ಸಮೀಪದ ಮಹಾಲಿಂಗಪುರದಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ನಡೆದಿರುವ ಹೋರಾಟವು ಶುಕ್ರವಾರ 310 ದಿನಗಳನ್ನು ಪೂರೈಸಿದೆ. ರಾಜ್ಯ ಸರ್ಕಾರ ಫೆಬ್ರವರಿ 17 ರ ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಮಹಾಲಿಂಗಪುರ ತಾಲೂಕು ಘೋಷಣೆ ಆಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಈ ನಿರೀಕ್ಷೆಗಳು ಸುಳ್ಳಾಯಿತು.

ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹೋರಾಟ ಸಮಿತಿ ಹಾಗೂ ಸಾರ್ವಜಿಕರು ನಿನ್ನೆ ಮಧ್ಯಾಹ್ನ ಚೆನ್ನಮ್ಮ ಸರ್ಕಲ್ ನಲ್ಲಿ ದಿಢೀರ್ ರಸ್ತೆ ತಡೆಯೊಂದಿಗೆ ಮುಷ್ಕರ ನಡೆಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೇರದಾಳ ಶಾಸಕ ಸಿದ್ದು ಸವದಿ, ಸಚಿವ ಗೋವಿಂದ ಕಾರಜೋಳ, ಸಂಸದ ಪಿ ಸಿ ಗದ್ದಿಗೌಡರ ಇನ್ನಿತರ ರಾಜಕೀಯ ಮುಖಂಡರ ವಿರುದ್ಧ ಹೋರಾಟಗಾರರು ವಾಗ್ದಾಳಿ ನಡೆಸಿದರು. ಅಲ್ಲದೆ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಹಾಲಿಂಗಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೆಲ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ಸಂಗಪ್ಪ ಹಳ್ಳಿ, ಹನುಮಂತ ಜಮಾದಾರ, ಶಿವನಿಂಗ ತಿರಕಿ, ಮಲ್ಲಿಕಾರ್ಜುನ ಹಲಗಿ ಗೌಡರ, ನಿಂಗಪ್ಪ ಬಾಳಿಕಾಯಿ ಸೇರಿದಂತೆ ಇತರರು ಭಾಗವಹಿಸಿದ್ದರು.

SCROLL FOR NEXT