ಬೆಂಗಳೂರು: ಸಕಲೇಶಪುರ ತಾಲೂಕಿನ ರಣಭಿಕ್ತಿ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಸುಂದರೇಶ್ ಮೃತಪಟ್ಟಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಅರಣ್ಯ ಕಾವಲುಗಾರರಿಗೆ ಮೂರ್ನಾಲ್ಕು ತಿಂಗಳಿಂದ ಸಂಬಳ ಸಿಗದಿರುವ ಸಂಗತಿಯ ಬೆನ್ನಲ್ಲೆ ಈ ಸಾವು ಸಂಭವಿಸಿದೆ. ಘಟನೆಯಲ್ಲಿ ಫಾರೆಸ್ಟರ್ ಮಂಜುನಾಥ್ ತೀವ್ರವಾಗಿ ಗಾಯಗೊಂಡು,ಗಂಭೀರ ಸ್ಥಿತಿಯಲ್ಲಿದ್ದಾರೆ. ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ಸಮಸ್ಯೆ ಬಿಗಡಾಯಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತರೀತಿ ಸಜ್ಜಾಗಬೇಕಲ್ಲವೆ? ಎಂದು ಕೇಳಿದೆ.
ಅರಣ್ಯ ಸಂರಕ್ಷಣೆಗಾಗಿ ಹಗಲಿರುಳು ದುಡಿಯುವ ಕಾವಲುಗಾರರಿಗೆ ಹಲವು ತಿಂಗಳಿಂದ ಸಂಬಳವೇ ಪಾವತಿಯಾಗಿಲ್ಲ. ಸಂಬಳ ಸಿಗದೆ ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಾವಲುಗಾರರು ವೃತ್ತಿಗೆ ಹಾಜರಾಗದಿರಲು ನಿರ್ಧರಿಸಿದ್ದರು. ಇದೇ ಸಂದರ್ಭದಲ್ಲಿ ಇಂತಹ ದುರ್ಘಟನೆ ನಡೆದಿದೆ. ಕಾಡ್ಗಿಚ್ಚು ತಡೆಗೆ ಅಗತ್ಯ ರಕ್ಷಣೆಯ ಸೌಲಭ್ಯಗಳನ್ನು ಕೊಡದೆ ಕಾವಲುಗಾರರ ಸಾವಿಗೆ ಕಾರಣವಾಗುವುದು ಯಾವ ಸೀಮೆಯ ಆಡಳಿತ? ಎಂದು ಟೀಕಿಸಿದೆ.