ರಾಜ್ಯ

ಕಲಬುರಗಿ: ಕಳ್ಳತನವಾಗಿದ್ದ ಸರ್ಕಾರಿ ಬಸ್'ನ್ನು 13 ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು

Manjula VN

ಕಲಬುರಗಿ: ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಸರ್ಕಾರಿ ಬಸ್'ನ್ನು 13 ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಳ್ಳತನವಾಗಿದ್ದ ಕೆಕೆಆರ್‌ಟಿಸಿ ಬಸ್'ನ್ನು ಚಿಂಚೋಳಿ ಪೊಲೀಸರು ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂಕೈಲಾಸ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ. .

ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೀದರ್ ಬಸ್ ಡಿಪೋ ನಂ 2 ರ ಕೆಎ 38 ಎಫ್ 971 ನಂಬರ್ ಪ್ಲೇಟ್ ಹೊಂದಿರುವ ಕೆಕೆಆರ್‌ಟಿಸಿ ಬಸ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಚಿಂಚೋಳಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಉಜ್ಜನಕೊಪ್ಪ ತಿಳಿಸಿದ್ದರು.

ಘಟನೆ ಬಳಿಕ ಪೊಲೀಸರು ಚಿಂಚೋಳಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಆದರೆ, ದೃಶ್ಯಾವಳಿಗಳು ಸ್ಪಷ್ಟವಾಗಿರಲಿಲ್ಲ. ಆದರೂ, ಇತರೆ ಮೂಲಗಳಿಂದ ವಿವರ ಸಂಗ್ರಹಿಸಿದ ಪೊಲೀಸು ಕಳ್ಳತನವಾದ 13 ಗಂಟೆಗಳಲ್ಲೇ ಬಸ್'ನ್ನು ಪತ್ತೆ ಮಾಡಿದ್ದಾರೆ.

ಕಳ್ಳರು ಬಸ್ಸನ್ನು ತೆಲಂಗಾಣದ ಕೊಡಂಗಲ್‌ಗೆ ಕೊಂಡೊಯ್ದು ತಾಂಡೂರು ಬಳಿ ತಂದು ಸರ್ಕಲ್ ಬಳಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಕಳ್ಳರು ತಾಂಡೂರು ಮಾರ್ಗವಾಗಿ ಬಸ್ ಓಡಿಸಿರುವ ಸುಳಿವು ಪೊಲೀಸರಿಗೆ ಸಿಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು 4 ತಂಡಗಳನ್ನು ರಚಿಸಿ ತಾಂಡೂರು, ಹೈದರಾಬಾದ್, ಕೊಡಂಗಲ್‌ಗೆ ತೆರಳಿ ಬಸ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಂಡೂರಿಗೆ ತೆರಳಿದ ತಂಡಕ್ಕೆ ತಾಂಡೂರು ಬಳಿಯ ವೃತ್ತದಲ್ಲಿ ಬಸ್ ನಿಂತಿರುವುದು ಕಂಡು ಬಂದಿದೆ. ಇದೀಗ ಉಜ್ಜನಕೊಪ್ಪ ಪೊಲೀಸರು ಬಸ್ ಕಳ್ಳತನ ಮಾಡಿದ್ದ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅವರ ಬಂಧನದ ನಂತರವೇ ಬಸ್ ಕಳ್ಳತನದ ಉದ್ದೇಶ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT