ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದಿಂದ ಹೊಸ ವರ್ಷಾಚರಣೆ; ಕೋವಿಡ್ ಆತಂಕ ವ್ಯಕ್ತಪಡಿಸಿದ ವೈದ್ಯರು

Manjula VN

ಬೆಂಗಳೂರು: ಬೆಂಗಳೂರಿನ ಹಲವಾರು ಭಾಗಗಳಲ್ಲಿ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು, ಕೋವಿಡ್ ಸೂಕ್ತ ನಡವಳಿಕೆ (ಸಿಎಬಿ) ಅನುಸರಿಸದ ಕಾರಣ ವೈದ್ಯರು ಕೋವಿಡ್ ವೈರಸ್ ಹರಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ವಿಶೇಷವಾಗಿ ಹೊಸ ವರ್ಷದ ಮುನ್ನಾದಿನದ ಸಮಯದಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಜನರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಕೋವಿಡ್ ನಿಯಮಗಳನ್ನು ಅನುಸರಿಸಿರಲಿಲ್ಲ.

ಈ ಸಂಭ್ರಮಾಚರಣೆಗಳು ಹಿಂದಿನ ಕೋವಿಡ್ ಪರಿಸ್ಥಿತಿಯನ್ನೇ ಎದುರು ಮಾಡಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಲ್ಲ. ಇದರಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹರಡಿರುವ ಸಾಧ್ಯತೆಗಳಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಸುಗುಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರವೀಂದ್ರ ಆರ್ ಅವರು ಮಾತನಾಡಿ, ಈ ಆಚರಣೆಗಳು ಖಂಡಿತವಾಗಿಯೂ ಕೋವಿಡ್ ಹೊರೆಯನ್ನು ಹೆಚ್ಚಿಸುತ್ತವೆ, ಏಕೆಂದರೆ ಜನರು ವೈರಸ್ ಅನ್ನು ಹೊತ್ತೊಯ್ಯುವ ಮತ್ತು ಹರಡುವ ಸಾಧ್ಯತೆಗಳು ಇಂತಹ ದೊಡ್ಡ ಕೂಟಗಳಲ್ಲಿಯೇ ಹೆಚ್ಚಾಗಿ ಇರುತ್ತವೆ. ಮುಂದಿನ ದಿನಗಳಲ್ಲಿ, ಕೋವಿಡ್ ರೋಗಲಕ್ಷಣಗಳನ್ನು ತೋರಿಸುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಜನವರಿ ಮಧ್ಯದಲ್ಲಿ, ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ, ಈ ಸಂದರ್ಭದಲ್ಲಿಯೂ ಹೆಚ್ಚೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಭಾರತದಲ್ಲಿ ಕೋವಿಡ್ -19 ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಸ್ತುತದ 40 ದಿನಗಳು ನಿರ್ಣಾಯಕ ಅವಧಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

SARS-CoV-2 ಓಮಿಕ್ರಾನ್ ರೂಪಾಂತರವು 5-10 ದಿನಗಳ ಅವಧಿಯನ್ನು ಹೊಂದಿದ್ದು, ಭಾರತವು ಮತ್ತೊಂದು ಅಲೆಯನ್ನು ನೋಡುತ್ತದೆಯೇ ಎಂದು ಅನುಮಾನಗಳು ಮೂಡತೊಡಗಿವೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂಬುದನ್ನು ಈ ಪರಿಸ್ಥಿತಿಗಳು ಸ್ಪಷ್ಟಪಡಿಸುತ್ತಿದೆ ಎಂದು ವಿವರಿಸಿದ್ದಾರೆ.

ಒಂದು ವೇಳೆ ದೈನಂದಿನ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇಕಡಾ 5 ಕ್ಕಿಂತ ಹೆಚ್ಚಾದರೆ, ಇದು ಆತಂಕಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

SCROLL FOR NEXT