ರಾಜ್ಯ

ಎಂಸಿಎ ಸುವರ್ಣ ಮಹೋತ್ಸವ: ನೂತನ ಲಾಂಛನ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಖಾಸಗಿ ಸಂಸ್ಥೆಗಳ ತೀವ್ರ ಪೈಪೋಟಿ ನಡುವೆ ಮಾರ್ಕೆಟಿಂಗ್‌ ಕಮ್ಯೂನಿಕೇಶನ್‌ ಆ್ಯಂಡ್‌ ಅಡ್ವರ್ಟೈಸ್‌ಮೆಂಟ್‌ ಸಂಸ್ಥೆ 50 ವರ್ಷ ಪೂರೈಸಿರುವುದು ಸುಲಭವದ ಮಾತಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದರು.

ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

ಈ ವೇಳೆ ಎಂಸಿಎಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು, "1991 ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನಂತರ ಖಾಸಗಿ ವಲಯವು ಆಗಾಧವಾಗಿ ಬೆಳೆಯಲು ಆರಂಭಿಸಿತು. ಎಂಸಿಎ ರಾಜ್ಯದಲ್ಲಿ ಖಾಸಗಿ ಕಂಪನಿಗಳೊಂದಿಗೆ ಮಾತ್ರವಲ್ಲದೆ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಪ್ರಚಾರ ನೀಡುವಲ್ಲಿ ಇತರ ರಾಜ್ಯಗಳ ಸ್ಪರ್ಧೆಯನ್ನು ಎದುರಿಸಿದೆ ಎಂದು ಹೇಳಿದರು.

“ತಂತ್ರಜ್ಞಾನವನ್ನು ಸಾಧ್ಯವಾದಷ್ಟು ಗರಿಷ್ಟ ಮಟ್ಟಕ್ಕೆ ಬಳಸಿ ಮತ್ತು ನಿಮ್ಮ ಸೃಜನಶೀಲತೆಯನ್ನು ಸುಧಾರಿಸಿ. ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಸಂವಹನ ತಂತ್ರವನ್ನು ಮಾರ್ಪಡಿಸಿ” ಎಂದು ಅವರು ಎಂಸಿಎಗೆ ಸೂಚಿಸಿದರು. ಇದೇ ವೇಳೆ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂಬ ಭರವಸೆಯನ್ನೂ ನೀಡಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, 1972-73ನೇ ಹಣಕಾಸು ವರ್ಷದಲ್ಲಿ ರೂ.78,747 ರೂ. ವಹಿವಾಟು ನಡೆಸುವುದರ ಮೂಲಕ ಶುಭಾರಂಭ ಮಾಡಿದ ಎಂಸಿಎ ಸಂಸ್ಥೆಯು ಕೇವಲ ಮೂರು ವರ್ಷಗಳಲ್ಲಿ ಅಂದರೆ 1975ರ ಮಾರ್ಚ್‌ ವೇಳೆಗೆ ರೂ. 20.31 ಲಕ್ಷ ವಹಿವಾಟು ನಡೆಸಿ ದಾಖಲೆ ಮಾಡಿದೆ. 2021-22 ನೇ ಹಣಕಾಸು ವರ್ಷದಲ್ಲಿ 406.03 ಕೋಟಿ ರೂ. ವಹಿವಾಟು ನಡೆಸಿದೆ ಎಂದರು.

ಸಂಸ್ಥೆಯು ಆರಂಭದಲ್ಲಿ ಕೆಲವೇ ಕೆಲ ಗ್ರಾಹಕರನ್ನು ಹೊಂದಿತ್ತು. ಆದರೀಗ 350ಕ್ಕೂ ಹೆಚ್ಚಿನ ಗ್ರಾಹಕರು, 400ಕ್ಕೂ ಹೆಚ್ಚಿನ ವೆಂಡರ್‌ಗಳನ್ನು ಹೊಂದಿದ್ದು ನೂರಾರು ಕೋಟಿ ರೂ. ವಹಿವಾಟು ಮಾಡುತ್ತಿದೆ. ಇದು ಸಂಸ್ಥೆಯ ಪ್ರಗತಿ ಹಾಗೂ ಕಾರ್ಯವೈಖರಿಗೆ ನಿದರ್ಶನವಾಗಿದೆ. ಸರಕಾರದ ಎಲ್ಲ ಇಲಾಖೆಗಳು ಇದೇ ರೀತಿ ಕಾರ್ಯನಿರ್ವಹಿಸಿದರೆ ರಾಜ್ಯವು ದೇಶದಲ್ಲೇ ಪ್ರಗತಿಪರ ಹಾಗೂ ಸಂಪದ್ಭರಿತ ರಾಜ್ಯವಾಗಲಿದೆ ಎಂದು ತಿಳಿಸಿದರು.

SCROLL FOR NEXT