ರಾಜ್ಯ

ನಮ್ಮ ಮೆಟ್ರೋ ಪಿಲ್ಲರ್ ಕುಸಿತ ದುರಂತ: 5-6 ದಿನಗಳಲ್ಲಿ ಐಐಎಸ್‌ಸಿಯಿಂದ ವರದಿ ಸಲ್ಲಿಕೆ

Manjula VN

ಬೆಂಗಳೂರು: ನಾಗಾವರದ ಮೆಟ್ರೋ ಪಿಲ್ಲರ್ ಕುಸಿತ ದುರಂತ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬೆಂಗೂರಿನ ಐಐಎಸ್‌ಸಿ 5-6 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ತನಿಖೆ ನಡೆಯುತ್ತಿರುವ ಭಾರತೀಯ ಭಾರತೀಯ ವಿಜ್ಞಾನ ಸಂಸ್ಥೆಯ ಉನ್ನತ ವಿಜ್ಞಾನಿಯೊಬ್ಬರು ಮಾತನಾಡಿ, ಬಹಳ ದಿನಗಳಿಂದ ಪಿಲ್ಲರ್ ನಿಲ್ಲಿಸಿದ್ದರಿಂದ ಇದು ದುರಂತಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಈ ನಡುವೆ ಐಐಎಸ್‌ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಜೆ.ಎಂ.ಚಂದ್ರ ಕಿಶನ್ ಅವರು ಬುಧವಾರ ಸಂಜೆ ಅಪಘಾತ ಸಂಭವಿಸಿದ ಎಚ್‌ಬಿಆರ್ ಲೇಔಟ್‌ನ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.

ಭೇಟಿಯ ನಂತರ ಮಾಧ್ಯಮ ಮಾತನಾಡಿದ ಕಿಶನ್ ಅವರು,  ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕೆಲ ತಪ್ಪುಗಳೇ ಕಾರಣ ಎಂಬುದು ತಿಳಿದುಬಂದಿದೆ. ಕಾಮಗಾರಿಗೆ ಬಳಸಿದ ಕಟ್ಟಡ ಸಾಮಾಗ್ರಿಗಳ ಬಗ್ಗೆ ವರದಿ ಕೇಳಲಾಗಿದೆ. ಕಬ್ಬಿಣ ತೂಕ ಜಾಸ್ತಿ ಆಗಿ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿದೆ. ಪಿಲ್ಲರ್‌ಗೆ ಸಪೋರ್ಟಿಂಗ್ ಕೊಡಬೇಕಿತ್ತು. ಬಹಳ ಸಮಯದ ಕಾಲ ಅದನ್ನು ನಿಲ್ಲಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಬಹು ಎತ್ತರ ಪಿಲ್ಲರ್ ಗಳನ್ನು ಬಹಳ ಸಮಯದ ಕಾಲ ನಿಲ್ಲಿಸಬಾರದು. ನಿಲ್ಲಿಸಿದ್ದೇ ಆದರೆ, ಅದ ತಾನಾಗಿಯೇ ಕೆಳಗೆ ಬೀಳುತ್ತದೆ. ಘಟನೆಯಲ್ಲಿ ಕೆಳಗೆ ಬಿದ್ದ ಪಿಲ್ಲರ್ 18 ಮೀಟರ್ ಉದ್ದವುಳ್ಳದ್ದಾಗಿದೆ ಎಂದು ಹೇಳಿದ್ದಾರೆ.

ಬಿಎಂಆರ್'ಸಿಎಲ್ ಎಂಜಿನಿಯರ್‌ಗಳು ಅಮಾನತು
ಘಟನೆ ಸಂಬಂಧ ಕೆಆರ್ ಪುರಂ-ಕೆಐಎ ಲೈನ್‌ನ ಪ್ಯಾಕೇಜ್ ಒಂದರಲ್ಲಿ ನೇಮಕಗೊಂಡಿರುವ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೆಕರಿ ಮತ್ತು ಸೆಕ್ಷನ್ ಎಂಜಿನಿಯರ್ ಜಾಫರ್ ಸಾದಿಕ್ ಎಂಬ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಅವರು, ಘಟನೆಯ ಕಾರಣಗಳನ್ನು ತನಿಖೆ ಮಾಡಲು ಬಿಎಂಆರ್‌ಸಿಎಲ್ ಆಂತರಿಕ ತಾಂತ್ರಿಕ ತಂಡವನ್ನು ರಚನೆ ಮಾಡಲಾಗಿದ್ದು, ಈಗಾಗಲೇ ಎಂಜಿನಿಯರ್ ಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT