ರಾಜ್ಯ

ಸಂಕ್ರಾಂತಿ ಸಂಭ್ರಮ: ಇಂದು ಗವಿಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ!

Manjula VN

ಬೆಂಗಳೂರು: ಇಂದು ನಾಡಿಗೆ ಸಂಕ್ರಾಂತಿ ಸಂಭ್ರಮ. ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. ಹೀಗಾಗಿ, ನಗರದ ಶ್ರೀ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಐತಿಹಾಸಿಕ ಕೌತುಕ ಕಣ್ತುಂಬಿಕೊಳ್ಳಲು ಕ್ಷಣಗಣನೆ ಶುರುವಾಗಿದೆ.

ಸಂಜೆ 5:17 ರಿಂದ 5:37ರ ನಡುವೆ ಸೂರ್ಯನ ಕಿರಣಗಳು ಗವಿ ಗಂಗಾಧರ ಸ್ವಾಮಿಯನ್ನು ಸ್ಪರ್ಶಿಸಲಿದೆ. 30 ರಿಂದ 40 ಸೆಕೆಂಡ್ ಗಳ ಕಾಲ ಗವಿಗಂಗಾಧರೇಶ್ವರರ ಮೇಲೆ ಸೂರ್ಯನ ಕಿರಣಗಳು ಬೀಳಲಿದ್ದು, ಪ್ರಕೃತಿಯ ಈ ವಿಸ್ಮಯದ ವೀಕ್ಷಣೆಗೆ ಭಕ್ತರು ಕಾತುರರಾಗಿದ್ದಾರೆ.

ಮೊದಲು ನಂದಿಯನ್ನು ಹಾದುಹೋಗುವ ಸೂರ್ಯನ ಕಿರಣಗಳು ನಂತರ ಪಾಣಿ ಪೀಠದ ಮೂಲಕ ಶಿವಲಿಂಗವನ್ನು ಸ್ಪರ್ಶಿಸಲಿದೆ.

ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಟೆಂಟ್, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.

SCROLL FOR NEXT