ರಾಜ್ಯ

ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಸ್ಥಗಿತ: ಶಿಕ್ಷಣ ಸಚಿವರಿಗೆ ಜೆಡಿಎಸ್ ತರಾಟೆ

Nagaraja AB

ಬೆಂಗಳೂರು: ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ  ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ  ನಿಲ್ಲಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ  ಶಾಲಾ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತ ವರದಿಯೊಂದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಜೆಡಿಎಸ್, ಶಿಕ್ಷಣ ಸಚಿವರೇ  ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ? ಅಥವಾ ಆರ್ ಎಸ್ ಎಸ್ ನ ನಿರ್ದೇಶನಕ್ಕೆ ಕಾಯುತ್ತಿರುವಿರೆ? ನಿಮ್ಮ ಕಳಪೆ ಆಡಳಿತದಿಂದ ಮಕ್ಕಳ ಹೊಟ್ಟೆಗೆ ಯಾಕೆ ಮೋಸ ಮಾಡುವಿರಿ? ಎಂದು ಪ್ರಶ್ನಿಸಿದೆ. 

ಮೊಟ್ಟೆಯ ಬೆಲೆಯು ಏರಿಕೆಯಾಗಿರುವುದೇ ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ. ಆಡಳಿತ ನಡೆಸುವವರಿಗೆ ದೂರದೃಷ್ಟಿ ಇರಬೇಕು. ವ್ಯವಸ್ಥೆಯನ್ನು ಅರಿತು, ಸಮಸ್ಯೆಗಳನ್ನು ತಡೆಯುವ ಚಾಕಚಕ್ಯತೆ ಇರಬೇಕು. ಸಮಸ್ಯೆಯಾಗುವವರೆಗೂ ಕಾಯ್ದು, ನಂತರ ಪರಿಹಾರಕ್ಕೆ ತಡಕಾಡುವುದು ಒಳ್ಳೆಯ ಲಕ್ಷಣವಲ್ಲ ಎಂದು ಟೀಕಿಸಿದೆ. 

ಈ ಹೊತ್ತಲ್ಲಿ ದರ ಪರಿಷ್ಕರಣೆ ಸಾಧ್ಯವಿಲ್ಲ. ಆ ಕುರಿತು ಪರಿಜ್ಞಾನ ಇದ್ದಿದ್ದರೆ, ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬರದಂತೆ ಮಾಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ, ಇದಕ್ಕೆ ಪರಿಹಾರ ಹುಡುಕಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಟ್ಟೆ ಸಿಗದ ಪರಿಸ್ಥಿತಿ ರಾಜ್ಯದಾದ್ಯಂತ ವಿಸ್ತರಿಸದ ಹಾಗೆ ನೋಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ. 

SCROLL FOR NEXT