ರಾಜ್ಯ

ಸಮೃದ್ಧ ಮಳೆಗೆ ರಾಜ್ಯದಲ್ಲಿ ಅಂತರ್ಜಲ ಮಟ್ಟ ವೃದ್ಧಿ: ಈ ವರ್ಷ ನೀರಿನ ಕೊರತೆ ಇರುವುದಿಲ್ಲ!

Manjula VN

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದರೂ ಅಂತರ್ಜಲ ಮಟ್ಟವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ಹೆಚ್ಚಿನ ಮಳೆಯಾಗಿದ್ದು, ಪರಿಣಾಮ ರಾಜ್ಯದಲ್ಲಿ ಶೇ.90ರಷ್ಟು ತಾಲೂಕುಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ ಎಂದು ತಿಳಿದುಬಂದಿದೆ.

ನೈಜ ಸಮಯದಲ್ಲಿ ನೀರಿನ ಮಟ್ಟ ಅಳೆಯಲು ಸಣ್ಣ ನೀರಾವರಿ ಇಲಾಖೆಯು ರಾಜ್ಯದ 1,500 ಬಾವಿಗಳಲ್ಲಿ ಸೆನ್ಸಾರ್ ಗಳನ್ನು ಅಳವಡಿಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ ರಾಜ್ಯದ ರಾಜ್ಯದ 233 ತಾಲ್ಲೂಕುಗಳಲ್ಲಿ, 11  ತಾಲ್ಲೂಕುಗಳಲ್ಲಿ ಮಾತ್ರ ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಹಿರಿಯ ಸಲಹೆಗಾರ ಜಿಎಸ್ ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದ್ದು, ಕಳೆದ ವರ್ಷದಲ್ಲಿ ಅತೀ ಹೆಚ್ಚಿನ ಮಳೆಯು ಅಂತರ್ಜಲ ಮಟ್ಟವನ್ನು ಉತ್ತಮ ಸ್ಥಿತಿಗೆ ತಲುಪಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿರುವುದು ಇದಕ್ಕೆ ಕಾರಣವಾಗಿದೆ,  ಮಳೆಯ ಪರಿಣಾಮ ಮಣ್ಣಿನ ತೇವಾಂಶ ಉತ್ತವಾಗಿದೆ. ಇದರಿಂದ ಬರದ ಪರಿಸ್ಥಿತಿಗಳು ಎದುರಾಗುವುದಿಲ್ಲ. ಈ ಬೆಳವಣಿಗೆ ರೈತರಿಗೂ ಸಹಾಯಕವಾಗಲಿದೆ. ರೈತರು ಬೋರ್‌ವೆಲ್ ನೀರಿನ ಮೇಲೆ ಅವಲಂಬಿತವಾಗುವುದನ್ನೂ ತಪ್ಪಿಸುತ್ತದೆ. ಉತ್ತಮ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿದ್ದು, ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಅಂತರ್ಜಲ ಮಟ್ಟ ಏರಿಕೆಯೊಂದಿಗೆ ನೀರಿನ ಗುಣಮಟ್ಟ ಕೂಡ ಸುಧಾರಿಸಿದೆ. ಹಲವೆಡೆ ಬೋರ್'ವೆಲ್ ನೀರು ಕೂಡ ಕುಡಿಯಲು ಯೋಗ್ಯವಾಗುವಂತಾಗಿದೆ ಎಂದಿದ್ದಾರೆ.

ಈ ನಡುವೆ 11 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಿರುವುದು ಕಂಡು ಬಂದಿದ್ದು, 11 ತಾಲೂಕುಗಳ ಪೈಕಿ ಬೆಂಗಳೂರು ಪೂರ್ವ ಭಾಗ ಕೂಡ ಒಂದಾಗಿದೆ. ಇಲ್ಲಿ 11.02 ಮೀಟರ್ ನಷ್ಟು ಅಂತರ್ಜಲ ಮಟ್ಟ ಕುಸಿದಿರುವುದು ಕಂಡು ಬಂದಿದೆ.

ನಂತರ ಚಿಕ್ಕಮಗಳೂರಿನ ಕಳಸದಲ್ಲಿ ಕಂಡು ಬಂದಿದೆ. ಇಲ್ಲಿ 9.75 ಮೀಟರ್ ಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಇನ್ನು ದಕ್ಷಿಣ ಕನ್ನಡದ ಮೂರು ತಾಲೂಕುಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿತವಾಗಿರುವುದು ಕಂಡು ಬಂದಿದೆ.

SCROLL FOR NEXT