ರಾಜ್ಯ

ತಾವೇ ಸೃಷ್ಟಿಸಿದ ಪ್ರವಾಹ ಪರಿಸ್ಥಿತಿಯನ್ನು ಬಳಸಿ ವಿಪಕ್ಷಗಳು ನಗರದ ವರ್ಚಸ್ಸನ್ನು ಹಾಳು ಮಾಡುತ್ತಿವೆ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬೃಹತ್‌ ಅಭಿವೃದ್ಧಿಗಳನ್ನು ನಡೆಸುತ್ತಿದ್ದರೂ ವಿರೋಧ ಪಕ್ಷಗಳು ನಗರದ ವರ್ಚಸ್ಸನ್ನು ಹಾಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೋಪಿಸಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, “ಭಾರೀ ಮಳೆಯಾದಾಗ, ಚೆನ್ನೈ, ದೆಹಲಿ ಮತ್ತು ಮುಂಬೈನಂತಹ ನಗರಗಳೂ ಜಲಾವೃತವಾಗುತ್ತವೆ. ಲಂಡನ್ ಮತ್ತು ಅಮೆರಿಕಾದ ಕೆಲವು ಭಾಗಗಳಲ್ಲಿಯೂ ಅದೇ ಪರಿಸ್ಥಿತಿ ಇರುತ್ತದೆ. ಆದರೆ, ದಾಖಲೆಯ ಮಳೆಯ ನಂತರ ಬೆಂಗಳೂರಿನ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಾಗ ಅದು ಅಂತರರಾಷ್ಟ್ರೀಯ ಸುದ್ದಿಯಾಗುತ್ತದೆ ಎಂದು ಹೇಳಿದರು.

ಇಂತಹ ದುಃಸ್ಥಿತಿಗೆ ಕಾರಣವನ್ನು ವಿವರಿಸಿದ ಅವರು, ಹಿಂದಿನ ಸರ್ಕಾರಗಳು ಯೋಜಿತವಲ್ಲದ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟವು ಮತ್ತು ಮಳೆನೀರು ಚರಂಡಿಗಳ ಅತಿಕ್ರಮಿಸಿ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟವು. ಈಗ ವಿರೋಧ ಪಕ್ಷದಲ್ಲಿರುವ ಅದೇ ಪಕ್ಷಗಳು ಪ್ರವಾಹ ಪರಿಸ್ಥಿತಿಯನ್ನು ಬಳಸಿಕೊಂಡು ನಗರದ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು.

ಮಳೆನೀರು ಚರಂಡಿಗಳ ಅಭಿವೃದ್ಧಿಗೆ ಸರ್ಕಾರ 2000 ಕೋಟಿ ರೂ. ಮೀಸಲಿಟ್ಟಿದ್ದು, ನಗರದ ಅಭಿವೃದ್ಧಿಗೆ 6500 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದರು. ಇದೇ ವೇಳೆ ನಗರದ ಅಭಿವೃದ್ಧಿ ಕುರಿತು ವಿರೋಧ ಪಕ್ಷಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ವಾರ್ಡ್‌ನಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, 32 ಕೋಟಿ ವೆಚ್ಚದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಬೊಮ್ಮಾಯಿ ಉದ್ಘಾಟಿಸಿದರು.

ಇದೇವೇಳೆ ಮಂಜುನಾಥನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ 166.7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೇಲ್ಸೇತುವೆಯನ್ನೂ ಮುಖ್ಯಮಂತ್ರಿಗಳು ಉದ್ಘಾಟಿಸಿದರು.

SCROLL FOR NEXT