ರಾಜ್ಯ

ಗುಂಡ್ಲುಪೇಟೆ: ಕಾರು-ಈಚರ್ ನಡುವೆ ಅಪಘಾತ, ಕಾರು ಚಾಲಕ ಸಜೀವ ದಹನ

Manjula VN

ಚಾಮರಾಜನಗರ: ಕಾರು ಹಾಗೂ ಈಚರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಕಾರಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಮೈಸೂರಿನ ಮುಜಾಮಿಲ್ ಅಹಮದ್(35) ಮೃತಪಟ್ಟ ಚಾಲಕ. ಈಚರ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಈಚರ್ ವಾಹನವು ಗುಂಡ್ಲುಪೇಟೆಯಿಂದ ಮೈಸೂರಿನ ಕಡೆಗೆ ಹಾಗೂ ಕಾರು ಮೈಸೂರು ಕಡೆಯಿಂದ ಗುಂಡ್ಲುಪೇಟೆಗೆ ಅತೀವೇಗದಿಂದ ತೆರಳುತ್ತಿತ್ತು. ಈ ವೇಳೆ ಎರಡು ವಾಹನಗಳ ನಡುವೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
 
ಘಟನೆ ವೇಳೆ ಈಚರ್ ವಾಹನದಲ್ಲಿದ್ದವರು ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ಚಾಲಕ ಹೊರಬರಲಾರದೆ ಸಜೀವ ದಹನವಾಗಿದ್ದಾನೆ ಎಂದು ಬೇಗೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಹಿತಿ ಅರಿತ ಅಗ್ನಿ ಶಾಮಕದಳದ ಸಿಬ್ಬಂದಿ ಕೂಡಲೇ ದೌಡಾಯಿಸಿ ಧಗಧಗಿಸುತ್ತಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಘಟನಾ ಸ್ಥಳಕ್ಕೆ ತಡರಾತ್ರಿ ಚಾಮರಾಜನಗರ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೋ ಭೇಟಿ ನೀಡಿ. ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT