ಬೆಂಗಳೂರು: ನಾಗಾಲ್ಯಾಂಡ್ನ 25 ವರ್ಷದ ಯುವಕನೊಬ್ಬನಿಗೆ ಆರು ಮಂದಿಯ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿದ ನಂತರ ಅವರ ತಲೆಬುರುಡೆ ಮುರಿದಿದ್ದು, ಹಲವು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಂಬಂಧ ಸೋಮವಾರ ದೂರು ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು ಗುರುವಾರ ಗ್ಯಾಂಗ್ನ ಮೂವರನ್ನು ಬಂಧಿಸಿದ್ದಾರೆ.
ಹಲಸೂರು ಸಿಎಂಎಚ್ ರಸ್ತೆಯಲ್ಲಿರುವ ಲಕ್ಷ್ಮೀಪುರ ನಿವಾಸಿ ತೆರ್ಚುಬಾ ಜೋಮಿರ್ ಹಲ್ಲೆಗೊಳಗಾದ ಯುವಕ. ಈತ ಇಂದಿರಾನಗರದ ಜನಪ್ರಿಯ ಪಬ್ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಜೂನ್ 29 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ತನ್ನ ಸ್ನೇಹಿತರಾದ ಇಮ್ಲಿವಾಪಾಂಗ್ ಮತ್ತು ಟಿಕ್ವಾಪಾಂಗ್ ಅವರೊಂದಿಗೆ ಮದ್ಯ ಖರೀದಿಸಲು ಬಿನ್ನಮಂಗಲ ಜಂಕ್ಷನ್ನಲ್ಲಿರುವ ಬಾರ್ಗೆ ಹೋದಾಗ ಜೋಮಿರ್ ಮೇಲೆ ಹಲ್ಲೆ ನಡೆಸಲಾಗಿದೆ.
ಬಾರ್ ಬಳಿ ಇದ್ದ ಗ್ಯಾಂಗ್ ಜೋಮಿರ್ ಮತ್ತು ಆತನ ಸ್ನೇಹಿತರನ್ನು ಚುಡಾಯಿಸಲು ಪ್ರಾರಂಭಿಸಿದ್ದು, ಜೋಮಿರ್ ಹಾಗೂ ಆತನ ಸ್ನೇಹಿತರೂ ಸಹ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತನಗೆ ಮತ್ತು ತನ್ನ ಸ್ನೇಹಿತರಿಗೆ ತೊಂದರೆ ಕೊಡಬೇಡಿ ಎಂದು ಜೋಮಿರ್ ಹೇಳಿದಾಗ, ಗ್ಯಾಂಗ್ ಸದಸ್ಯರು ಅವರ ಮೇಲೆ ಕಲ್ಲು ಎಸೆದಿದ್ದಾರೆ. ಈ ದಾಳಿಯಲ್ಲಿ ಜೋಮಿರ್ ತಲೆಗೆ ಗಂಭೀರ ಗಾಯಗೊಂಡು ಪ್ರಜ್ಞಾಹೀನರಾಗಿದ್ದರು ಎಂದು ತಿಳಿದುಬಂದಿದೆ.