ಬೆಂಗಳೂರು: ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬ್ಯಾಟರಾಯನಪುರ ಸಮೀಪದ ಪ್ರಮೋದ್ ನಗರದ ನಿವಾಸಿ ರಾಮಕುಮಾರ್ ಎಂದು ಗುರುತಿಸಲಾಗಿದೆ. ಬಿ.ಟೆಕ್ ಪದವೀಧರರಾಗಿರುವ ಅವರು ತಮಿಳುನಾಡು ಮೂಲದವರಾಗಿದ್ದು, ಷೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದರು.
ಸೋದರಮಾವನಾಗಿರುವ ಯಶವಂತ್ ಅವರಿಗೆ ಘಟನೆಯಲ್ಲಿ ಮೂಳೆ ಮುರಿತ ಸೇರಿದಂತೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತ ರಾಮ್ಕುಮಾರ್, ಯಶವಂತ್ ಅವರ ಸಹೋದರಿಯನ್ನು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಇವರಿಬ್ಬರು ಇತರ ಸ್ನೇಹಿತರೊಂದಿಗೆ ಕಾಫಿ ಕುಡಿಯಲು ದ್ವಿಚಕ್ರ ವಾಹನದಲ್ಲಿ ಜೆಪಿ ನಗರಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಟ್ಟಡ ಕಾಮಗಾರಿ ವೇಳೆ ನಿಗೂಢ ಸ್ಪೋಟ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಭಾನುವಾರ ಮಧ್ಯರಾತ್ರಿ 12.30ಕ್ಕೆ ಚೆನ್ನಮ್ಮ ಸರ್ಕಲ್ ಮೇಲ್ಸೇತುವೆಯಲ್ಲಿ ಸಾಗುತ್ತಿದ್ದಾಗ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದ ಯಶವಂತ್ ನಿಯಂತ್ರಣ ತಪ್ಪಿ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದಿದಿದ್ದಾರೆ. ಈ ವೇಳೆ ಅಪಘಾತದಿಂದ ತಪ್ಪಿಸಿಕೊಳ್ಳಲು ರಾಮ್ ಕುಮಾರ್ ಅವರು ಬೈಕ್ ನಿಂದ ಹಾರಿದ್ದು, ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಳಿಕ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ರಾಮ್ ಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ರಾಮ್ ಕುಮಾರ್ ಅವರು, ಹಾಫ್ ಹೆಲ್ಮೆಟ್ ಧರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಯಶವಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಬನಶಂಕರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.