ರಾಜ್ಯ

ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟದ ಮೇಲೆ ಅಧಿಕಾರಿಗಳ ನಿಗಾ!

Manjula VN

ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್ ಗಳ ಅವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಒಂದೊಂದು ಕ್ಯಾಂಟೀನ್'ಗೆ ಒಬ್ಬೊಬ್ಬ ಅಧಿಕಾರಿ ನೇಕಮ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿಗಳು ಭಾನುವಾರ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ನಗರದ ಪ್ರತಿ ಇಂದಿರಾ ಕ್ಯಾಂಟೀನ್'ಗೆ ನಿರ್ದಿಷ್ಟವಾಗಿ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜನೆಗೊಳಿಸಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್ ಗಳಲ್ಲಿ ಬಿಬಿಎಂಪಿಯ ಹಳೆಯ ಸಹಾಯವಾಣಿ ಸಂಖ್ಯೆ ಇದೆ. ಇದೀಗ 1533 ಸಹಾಯವಾಣಿಯನ್ನು ಹೊಸದಾಗಿ ಆರಂಭಿಸಲಾಗಿದೆ. ಈ ಸಂಖ್ಯೆಯನ್ನು ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಅಳವಡಿಕೆ ಮಾಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ನಡಾವಳಿಗಳ ಆಧಾರದ ಮೇಲೆ ದಾಖಲೆಗಳ ಸಿದ್ಧಪಡಿಸಿ ವಲಯವಾರು ಟೆಂಡರ್‌ಗಳನ್ನು ತರಲಾಗುವುದು ಎಂದು ತಿಳಿಸಿದರು.

ಈ ಪ್ರಕ್ರಿಯೆಯು 15 ರಿಂದ 20 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಪ್ರಸ್ತುತ ಹಿಂದಿನ ಗುತ್ತಿಗೆದಾರರು ಈ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಗುತ್ತಿಗೆದಾರರು ಅಧಿಕಾರ ವಹಿಸಿಕೊಳ್ಳಲಿದ್ದು, ದರ ಹಾಗೂ ಮೆನು ಬದಲಾವಣೆ ಮಾಡಲಾಗುವುದು ಎಂದರು.

ಉಪ ಮುಖ್ಯಮಂತ್ರಿಗಳ ಸೂಚನೆಯಂತೆ ಕಸದ ಸಮಸ್ಯೆಗಳು, ಗುಂಡಿಗಳು ಮತ್ತು ಬೀದಿದೀಪಗಳ ಬಗ್ಗೆ ಗಮನಹರಿಸಲು ವಿಜಿಲೆನ್ಸ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗುವುದು. ತ್ಯಾಜ್ಯದಿಂದ ಇಂಧನ ಸಂಸ್ಕರಣಾ ಘಟಕವು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಒಪ್ಪಂದಗಳನ್ನು ರದ್ದುಗೊಳಿಸಲಾಗುವುದು. ಈ ಕುರಿತ ಎಲ್ಲಾ ವಿವರಗಳನ್ನು ಟೆಂಡರ್ ದಾಖಲೆಗಳೊಂದಿಗೆ ಸರ್ಕಾರಕ್ಕೆ ಕಳುಹಿಸಲಾಗುವುದು. ಶೀಘ್ರದಲ್ಲೇ ಎಲ್ಲಾ ಸಂಸ್ಕರಣಾ ಘಟಕಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಆಲ್ಲದೆ, ಮಂಗಳವಾರದಿಂದ ಬೀದಿ ನಾಯಿ ಗಣತಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

SCROLL FOR NEXT