ರಾಜ್ಯ

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ಸೆಪ್ಟಿಕ್ ಟ್ಯಾಂಕ್''ಗಾಗಿ ಗುಂಡಿ ತೋಡುತ್ತಿದ್ದ ಇಬ್ಬರ ಬಂಧನ

Manjula VN

ಬೆಂಗಳೂರು: ವಾಜರಹಳ್ಳಿ 80 ಫೀಟ್ ರೋಡ್ ಪಾದಚಾರಿ ಮಾರ್ಗದಲ್ಲಿ ಸೆಪ್ಟಿಕ್ ಟ್ಯಾಂಕ್‌ಗಾಗಿ ಬೃಹತ್ ಗುಂಡಿ ಅಗೆಯುತ್ತಿದ್ದ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.

ಪಾದಚಾರಿ ಮಾರ್ಗದಲ್ಲಿ ಹೊಂಡ ಅಗೆಯುತ್ತಿರುವ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಲಘಟ್ಟಪುರ ಪೊಲೀಸರಿಗೆ ಒತ್ತಾಯಿಸಿದ್ದರು.

ಬಿಬಿಎಂಪಿ ಅಧಿಕಾರಿಗಳ ಒತ್ತಾಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಗಸ್ತು ತಿರುಗುತ್ತಿದ್ದ ಹೊಯ್ಸಳ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಕಾಮಗಾರಿಯನ್ನು ತಡೆದರು. ಇದೇ ವೇಳೆ ಸೈಟ್ ಎಂಜಿನಿಯರ್ ಸುಧೀರ್ ಭಟ್ ಮತ್ತು ಮೇಸ್ತ್ರಿ ಕೀರ್ತಿ ರಾಜ್ ಅವರನ್ನು ಬಂಧನಕ್ಕೊಳಪಡಿಸಿದರು.

ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 283 (ಸಂಚಾರಕ್ಕೆ ಅಡ್ಡಿ ಉಂಟುಮಾಡುವ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರನ್ನೂ ಠಾಣೆಗೆ ಕರೆತಂದು ಅಗೆದಿರುವ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದು ತಲಘಟ್ಟಪುರ ಸಂಚಾರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ನಾಯ್ಕ್ ಅವರು ಹೇಳಿದ್ದಾರೆ.

ಕಟ್ಟಡದ ಮಾಲೀಕ ರೇವಣ್ಣ ಅವರಿಗೆ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ಆದರೆ, ಅವರು ಊರಿಂದ ಹೊರಗಿರುವುದರಿಂದ ಶೀಘ್ರದಲ್ಲಿಯೇ ಠಾಣೆಗೆ ಬರುವುದಾಗಿ ತಿಳಿಸಿದ್ದಾರೆಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಗುಂಡಿ ಅಗೆಯಲು ಅನುಮತಿ ಪಡೆಯುವ ಕಾರ್ಯ ವಿಧಾನಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈ ಪ್ರದೇಶದಲ್ಲಿ ಯಾವುದೇ ನೈರ್ಮಲ್ಯ ಸಂಪರ್ಕಗಳಿಲ್ಲ. ಬಹುತೇಕ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳು ಒಳಚರಂಡಿ ನೀರನ್ನು ಸೆಪ್ಟಿಕ್ ಟ್ಯಾಂಕ್ ಗಳಿಗೆ ಬಿಡುತ್ತಿವೆ. ಹೀಗಾಗಿ ನಾವೂ ಕೂಡ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದೆವು. ಈ ಬಗ್ಗೆ ಮಾಲೀಕ ರೇವಣ್ಣ ಅವರಿಗೂ ಮಾಹಿತಿ ಇತ್ತು ಎಂದು ಸುದೀರ್ ಭಟ್ ಅವರು ಹೇಳಿದ್ದಾರೆ.

ಕನಕಪುರ ರಸ್ತೆಯ ಚೇಂಜ್ ಮೇಕರ್ಸ್ ಸಂಸ್ಥೆಯ ಅಬ್ದುಲ್ ಅಲೀಂ ಮಾತನಾಡಿ, ಇಂತಹ ಅವಿವೇಕದ ಕೆಲಸಗಳ ನಿಲ್ಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿದ್ದೇವೆ. ಈ ಸಂಬಂಧ ಇರುವ ಐಪಿಸಿ ಸೆಕ್ಷನ್ ಗಳು ಬಹಳ ದುರ್ಬಲವಾಗಿವೆ. ದೂರು ದಾಖಲಿಸುವಂತೆ ಬಿಡಿಎಗೆ ಮನವಿ ಮಾಡಿಕೊಂಡಿದ್ದೇವೆಂದು ತಿಳಿಸಿದ್ದಾರೆ.

SCROLL FOR NEXT