ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಅಭಿಯಾನ ಆರಂಭಿಸಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯಪುರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ), “ಬ್ರ್ಯಾಂಡ್ ಬೆಂಗಳೂರು ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಉತ್ತಮ ಆಡಳಿತ, ನಾಗರಿಕ ಕೇಂದ್ರಿತ ನೀತಿ, ಸೇವಾ ವಿತರಣೆ, ಭೂ-ಪ್ರಾದೇಶಿಕ ಯೋಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಪನ್ಮೂಲ ಹಂಚಿಕೆಯ ದೃಷ್ಟಿಯಿಂದ ಗಮನಹರಿಸಬೇಕಾದ ಏಳು ವಿಷಯಗಳನ್ನು ಗುರುತಿಸಲಾಗಿದೆ” ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಅಧಿಕಾರಿಗಳಿಗಿಂತ ಮಕ್ಕಳಲ್ಲಿ ಉತ್ತಮ ಆಲೋಚನೆ; ಬೆಂಗಳೂರು ಕಟ್ಟಿದ್ದು ಮಾಜಿ- ಹಾಲಿ ಸಿಎಂಗಳಲ್ಲ: ಡಿ.ಕೆ ಶಿವಕುಮಾರ್
ಈ ಉಪಕ್ರಮದ ಭಾಗವಾಗಿ, ‘ಜನಹಿತ/ಆಕರ್ಷಕ ಬೆಂಗಳೂರು’ ವಿಷಯಕ್ಕೆ ವಿಶೇಷ ಆಯುಕ್ತ(ಹಣಕಾಸು) ಹಾಗೂ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ, ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಯನ್ನು ಪಾಲುದಾರರಾಗಿ ಮಾಡಿದೆ” ಎಂದು ತಿಳಿಸಿದೆ.
“ಜನಹಿತ/ಆಕರ್ಷಕ ಬೆಂಗಳೂರು(ವೈಬ್ರೆಂಟ್ ಬೆಂಗಳೂರು) ಅನ್ನು ಸರಿಯಾದ ಅನುಕ್ರಮದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಯ ಅಡಿ ಒಂದು ಸಮಿತಿಯನ್ನು ರಚಿಸಿಕೊಳ್ಳಲಾಗಿದೆ ಎಂದು ಜಯರಾಮ್ ರಾಯಪುರ ತಿಳಿಸಿದ್ದಾರೆ.