ಮಡಿಕೇರಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳು ಬಹುತೇಕ ಪ್ರದೇಶಗಳಲ್ಲಿ ಕೇವಲ ಪೇಪರ್ಗಳಲ್ಲಿ ಮತ್ತು ಫೋಟೋದಲ್ಲಿ ಮಾತ್ರ ನೋಡಬಹುದು ಎಂಬುದಕ್ಕೆ ಮಡಿಕೇರಿಯ ಆರ್ಆರ್ಆರ್ ಕೇಂದ್ರಗಳು ಸಾಕ್ಷಿಯಾಗಿ ನಿಂತಿವೆ.
ಮಡಿಕೇರಿ ನಗರ ಪಾಲಿಕೆ ಆಯುಕ್ತರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಗರದಲ್ಲಿ ಕಳೆದ ಮೇ 20 ರಂದು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ‘ಮೈ ಲೈಫ್, ಮೈ ಕ್ಲೀನ್ ಸಿಟಿ’ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ನಗರದಾದ್ಯಂತ ಐದು ಆರ್ಆರ್ಆರ್(ಕಡಿಮೆ ಮಾಡುವುದು, ಮರುಬಳಕೆ, ಪುನರ್ ಬಳಕೆ') ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.
ಇದನ್ನು ಓದಿ: ಮಡಿಕೇರಿ-ಮಂಗಳೂರು ಹೆದ್ದಾರಿ ರಸ್ತೆ ಭೂಕುಸಿತ: ಶಾಶ್ವತ ಪರಿಹಾರಕ್ಕೆ 2018ರಿಂದ ಇನ್ನೂ ಸಿಕ್ಕಿಲ್ಲ ಅನುಮೋದನೆ!
ಮೊಬೈಲ್ ವಾಹನಗಳಲ್ಲಿ ಅಳವಡಿಸಲಾದ ಲೌಡ್ ಸ್ಪೀಕರ್ಗಳು ಇನ್ನೂ ನಗರದಾದ್ಯಂತ ಸುತ್ತು ಹಾಕುತ್ತಿವೆ ಮತ್ತು ಹಳೆಯ ಪುಸ್ತಕಗಳು, ಇ-ತ್ಯಾಜ್ಯ ಹಾಗೂ ಇತರ ಮರುಬಳಕೆ ಮಾಡಬಹುದಾದ ಮತ್ತು ಸಂಸ್ಕರಿಸಬಹುದಾದ ವಸ್ತುಗಳನ್ನು ದಾನ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿವೆ.
ಆದಾಗ್ಯೂ, ನಗರದಾದ್ಯಂತ ಇರುವ ಎಲ್ಲಾ ಐದು ಆರ್ಆರ್ಆರ್ ಕೇಂದ್ರಗಳು ನಿಷ್ಕ್ರಿಯಗೊಂಡಿವೆ. ಆದರೆ ಕೆಲವು ನಿವಾಸಿಗಳು ನೀಡಿದ ವಸ್ತುಗಳು ಆರ್ಆರ್ಆರ್ ಕೇಂದ್ರಗಳಲ್ಲಿ ಅನಾಥವಾಗಿ ಬಿದ್ದಿವೆ. ಮಡಿಕೇರಿಯ ಟೌನ್ ಹಾಲ್ ನಗರದ ಮಧ್ಯಭಾಗದಲ್ಲಿ, ನಿವಾಸಿಗಳು ದಾನವಾಗಿ ನೀಡಿದ ಸಾಮಗ್ರಿಗಳು ಜೂನ್ 5 ರ ವೇಳೆಗೆ ಕಸದ ಗುಂಡಿ ಸೇರುವ ಸಾಧ್ಯತೆಯಿದೆ.
ಜೂನ್ 5 ರ ವಿಶ್ವ ಪರಿಸರ ದಿನದವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ ಸಿಎಂಸಿ ಅಧಿಕಾರಿಗಳ ನಿರಾಸಕ್ತಿಯಿಂದ ಮೊದಲ ದಿನದಿಂದಲೇ ಸಮರ್ಪಕವಾಗಿ ಕಾರ್ಯನಿರ್ವಹಿಸಲು ವಿಫಲವಾಗಿವೆ.
ಡಂಪಿಂಗ್ ಯಾರ್ಡ್ಗೆ ಹೋಗುವ ತ್ಯಾಜ್ಯವನ್ನು ಕಡಿಮೆಗೊಳಿಸಿ, ಮರುಬಳಕೆ ಮತ್ತು ಪುನರ್ ಬಳಕೆಗೆ ಪ್ರೋತ್ಸಾಹ ನೀಡುವುದು ಈ ಆರ್ಆರ್ಆರ್ ಕೇಂದ್ರದ ಉದ್ದೇಶವಾಗಿದೆ.