ಬೆಂಗಳೂರು: ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ..ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧ (Vidhanasoudha) ದಲ್ಲಿ ನಾಡಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಿಎಸ್ ವಂದಿತಾ ಶರ್ಮಾ ಅವರಿಗೆ ಮೊದಲ ಶೂನ್ಯ ಟಿಕೆಟ್ ನೀಡಿ ಉಚಿತ ಪ್ರಯಾಣ (Free Bus Ticket For Women) ಕ್ಕೆ ಚಾಲನೆಯನ್ನು ಸಿಎಂ ನೀಡಿದರು. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ವೇದಿಕೆಯಲ್ಲಿ ಐವರು ಮಹಿಳೆಯರಿಗೆ ಮಾದರಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯ್ತು. ವಿಧಾನಸೌಧದ ಮುಂದೆ ನಿಲ್ಲಿಸಲಾಗಿದ್ದ ಬಸ್ಗಳಿಗೆ ಶಕ್ತಿ ಯೋಜನೆಯ ಸ್ಟಿಕರ್ ಅಂಟಿಸಲಾಯ್ತು.
ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಏರ್ಪಡಿಸಲಾಗಿರುವ ಶಕ್ತಿ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆ ಜಾರಿ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಗ್ಯಾರಂಟಿಗಳ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಕ್ತಿ ಯೋಜನೆಯನ್ನ ಅತ್ಯಂತ ಸಂತೋಷ ದಿಂದ ಉದ್ಘಾಟನೆ ಮಾಡಿದ್ದೇನೆ. ನಾನು ಕೂಡ ಬಹಳ ಸಂತೋಷವಾಗಿದ್ದೇನೆ. ಈ ಯೋಜನೆ ಮಹಿಳೆಯಾರಿಗಾಗಿ ಮಾಡಿರುವ ಕಾರ್ಯಕ್ರಮ. ಶಕ್ತಿ ಯೋಜನೆಯನ್ನ ಅತ್ಯಂತ ಸಂತೋಷ ದಿಂದ ಉದ್ಘಾಟನೆ ಮಾಡಿದ್ದೇನೆ. ನಾನು ಕೂಡ ಬಹಳ ಸಂತೋಷವಾಗಿದ್ದೇನೆ. ಈ ಯೋಜನೆ ಮಹಿಳೆಯಾರಿಗಾಗಿ ಮಾಡಿರುವ ಕಾರ್ಯಕ್ರಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ 10 ಕೆಜಿ ಅಕ್ಕಿ
ಇದೇ ವೇಳೆ ಅನ್ನಭಾಗ್ಯ ಯೋಜನೆ ಕುರಿತು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ. ಬಿಪಿಎಲ್, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ. ಅನ್ನಭಾಗ್ಯ ಯೋಜನೆಗೆ 10 ಸಾವಿರದ ನೂರು ಕೋಟಿ ಖರ್ಚಾಗುತ್ತದೆ ಎಂದು ಹೇಳಿದರು.
‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ
ತಮ್ಮ ಭಾಷಣದ ವೇಳೆ ‘ಶಕ್ತಿ’ ಎಂದು ಹೆಸರು ಇಟ್ಟಿದ್ದು ಯಾಕೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದರು. ಹೆಣ್ಣುಮಕ್ಕಳಿಗೆ ಶಕ್ತಿ ತುಂಬೋಕೆ ಅಂತ ಈ ಹೆಸರು ಇಟ್ಟೆವು. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮತೋಲನ ಕಡಿಮೆ ಮಾಡಬಹುದು. 5 ಗ್ಯಾರಂಟಿ ಪೈಕಿ 4 ಗ್ಯಾರಂಟಿ ಮಹಿಳೆಯರಿಗೆ ಸೀಮಿತ, ಅವರಿಗೆ ಸಂಬಂಧಿಸಿದೆ. ಕೆಲವರು ಇದಕ್ಕೆ ಗೇಲಿ ಮಾಡಿ, ಕುಹಕ ಮಾತು ಆಡ್ತಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ಗೇಲಿ ಮಾಡೋರಿಗೆ, ಕುಹಕ ಮಾಡೋರಿಗೆ ಸೊಪ್ಪು ಹಾಕಲ್ಲ ಎಂದು ಹೇಳಿದರು.
ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ್ರೆ ಪುರುಷರಷ್ಟೆ ಮಹಿಳೆಯರಿಗೆ ಅವಕಾಶ ಸಿಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲದೆ ಹೋದ್ರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಮಹಿಳೆಯರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ. ಅಮೆರಿಕಾ, ಚೀನ, ಆಸ್ಟ್ರೇಲಿಯ, ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಭಾರತದಲ್ಲಿ 24% ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಾರೆ. 2014 ರಲ್ಲಿ 30% ರಿಂದ 24% ಗೆ ಇಳಿದಿದೆ. ಇದನ್ನ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯ ಬಗ್ಗೆ ಮೊಸಳೆ ಕಣ್ಣೀರು ಹಾಕೋರ ಕಾಲದಲ್ಲಿ 30% ನಿಂದ 24% ಮಹಿಳೆ ಪಾಲ್ಗೊಳ್ಳುವಿಕೆ ಆಗಿದೆ. ಮನುವಾದಿಗಳು ಬಯಸೋದೆ ಅದು. ಹೆಣ್ಣು ಮಕ್ಕಳು ಹೊರಗೆ ಬರಬಾರದು ಅನ್ನೋದು ಮನುವಾದಿಗಳ ಆಸೆ. ಯಾವ ದೇಶದಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೆ ದೇಶ ಅಭಿವೃದ್ಧಿ ಆಗುತ್ತೆ ಎಂದರು.
ಡಿಸಿಎಂ ಡಿಕೆಶಿವಕುಮಾರ್ (DK Shivakumar), ಸಚಿವ ಮಧು ಬಂಗಾರಪ್ಪ, ಸಚಿವ ಕೆಜೆ ಜಾರ್ಜ್, ಎಂಎಲ್ಸಿ ಹರಿಪ್ರಸಾದ್, ನಾಗರಾಜ್ ಯಾದವ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜು, ಅಧಿಕಾರಿಗಳಾದ ರಾಖೇಶ್ ಸಿಂಗ್, ರಜನೀಶ್ ಗೊಯಲ್, ಬಿಎಂಟಿಸಿ ಎಂಡಿ ಸತ್ಯವತಿ, ಅನ್ಬು ಕುಮಾರ್ ಮೊದಲಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇಂದು (ಭಾನುವಾರ) ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.