ರಾಜ್ಯ

ಮಡಿವಾಳ ಪೊಲೀಸರು ಸೀಜ್ ಮಾಡಿದ್ದ ದ್ವಿಚಕ್ರ ವಾಹನಗಳನ್ನೇ ಕದ್ದ ದುಷ್ಕರ್ಮಿಗಳು!

Ramyashree GN

ಬೆಂಗಳೂರು: ಮಡಿವಾಳ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದ ಐದು ದ್ವಿಚಕ್ರ ವಾಹನಗಳನ್ನು ಅಪರಿಚಿತ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಟ್ರಾಫಿಕ್ ಅಧಿಕಾರಿ ರಮೇಶ್ ಅವರು ಜೂನ್ 9 ರಂದು ವಾಹನಗಳ ಎಣಿಕೆ ಮಾಡಲು ಹೋದಾಗ ನಾಲ್ಕು ಬೈಕ್ ಮತ್ತು ಸ್ಕೂಟರ್ ಕಳ್ಳತನವಾಗಿರುವುದು ತಿಳಿದುಬಂದಿದೆ. 

ಈ ದ್ವಿಚಕ್ರ ವಾಹನಗಳನ್ನು ವಿವಿಧ ಸಂಚಾರಿ ನಿಯಮ ಉಲ್ಲಂಘನೆಗಳಿಗಾಗಿ ಪೊಲೀಸರು ವಶಪಡಿಸಿಕೊಂಡಿದ್ದರು. ಠಾಣೆಯಲ್ಲಿ ಜಾಗವಿಲ್ಲದ ಕಾರಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕಟ್ಟಡದ ಕಾಂಪೌಂಡ್ ಒಳಗೆ ನಿಲ್ಲಿಸಲಾಗಿತ್ತು.

ಟ್ರಾಫಿಕ್ ಪ್ರಕರಣಗಳ ನ್ಯಾಯಾಲಯದ ವಿಚಾರಣೆಗಳು ಇನ್ನೂ ಪೂರ್ಣಗೊಳ್ಳದ ಕಾರಣ ಸಂಚಾರ ಪೊಲೀಸರು ಈ ವಾಹನಗಳನ್ನು ಅಲ್ಲಿ ನಿಲ್ಲಿಸಿದ್ದರು. ಎಫ್‌ಎಸ್‌ಎಲ್‌ನ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿದ್ದಾಗ ಆರೋಪಿಗಳು ಕಳ್ಳತನ ಮಾಡಿರಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳ್ಳತನದ ಹಿಂದೆ ಒಳಗಿನ ವ್ಯಕ್ತಿಗಳಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕುತ್ತಿಲ್ಲ.

'ಅಂತಹ ವಶಪಡಿಸಿಕೊಂಡ ವಾಹನಗಳನ್ನು ವಿಚಾರಣೆಯ ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಅವುಗಳನ್ನು ಹಿಂತಿರುಗಿಸಬಹುದು. ಕಳುವಾದ ದ್ವಿಚಕ್ರ ವಾಹನಗಳು ನಾಲ್ಕು ವರ್ಷಕ್ಕಿಂತ ಹಳೆಯ ಪ್ರಕರಣಗಳಲ್ಲಿ ಭಾಗಿಯಾದವುಗಳಾಗಿವೆ. ಅತಿವೇಗದ ಸವಾರಿ ಮತ್ತು ಇತರರಿಗೆ ಗಂಭೀರ ಗಾಯವುಂಟು ಮಾಡಿದ ಕಾರಣಕ್ಕಾಗಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದು ಪ್ರಕರಣಗಳಲ್ಲಿ ಒಂದು ಮಾರಣಾಂತಿಕ ಅಪಘಾತವಾಗಿದೆ' ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.

ಮಡಿವಾಳ ಸಂಚಾರ ಠಾಣೆಯ ಸಬ್ಇನ್ಸ್‌ಪೆಕ್ಟರ್ ರವಿ ಮಡಿವಾಳರ, ಶನಿವಾರ ದೂರು ದಾಖಲಿಸಿದ್ದಾರೆ. ಮೇ 25 ರಿಂದ ಜೂನ್ 9ರ ನಡುವೆ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಮಹಾ ಎಫ್‌ಜೆಡ್, ಸುಜುಕಿ ಆಕ್ಸೆಸ್, ಸುಜುಕಿ ಹಯಾತೆ, ಹೀರೋ ಹೋಂಡಾ ಪ್ಯಾಶನ್ ಮತ್ತು ಬಜಾಜ್ ಪಲ್ಸರ್ ದ್ವಿಚಕ್ರ ವಾಹನಗಳು ಕಳುವಾಗಿದ್ದು, ಇವುಗಳ ಮೌಲ್ಯ ಸುಮಾರು 1.2 ಲಕ್ಷ ರೂ. ಆಗಿದೆ.

'ಕಳುವಾದ ವಾಹನಗಳಿಗಾಗಿ ನಾವು ಸುತ್ತಮುತ್ತಲಿನ ಪ್ರದೇಶಗಳನ್ನು ಹುಡುಕಿದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಾವು ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೊಲೀಸ್ ದೂರು ದಾಖಲಿಸಲು ವರಿಷ್ಠರ ಸೂಚನೆಯನ್ನು ಪಾಲಿಸಿದ್ದೇನೆ ಎಂದು ಮಡಿವಾಳರ ಹೇಳಿದ್ದಾರೆ. ಆದರೆ, ದೂರಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

SCROLL FOR NEXT